ಅಷ್ಟಕ್ಕೂ ವಿವಾಹ ದುಬಾರಿಯಾ?

'ಕವರ್ ಸ್ಟೋರಿ' ಅಲ್ ಅಹ್ಸನ್ ಮಾಸಿಕ
 ಎಸ್.ಬಿ.ದಾರಿಮಿ ಪುತ್ತೂರು
...................................
     ಇಸ್ಲಾಂ ಧರ್ಮದಲ್ಲಿ ವಿವಾಹವೆಂಬುದು ಪವಿತ್ರವಾದ ಒಂದು ವ್ಯವಹಾರ. ಇದನ್ನು 'ಬಂದನ' ಎಂಬುದಾಗಿ ಬಿಂಬಿಸುವುತ್ತಿರುವುದರಲ್ಲೇ ನಮಗೆ ಎಡವಟ್ಟಾಗಿದೆ ನೋಡಿ, ಅಷ್ಟಕ್ಕೂ ಇಸ್ಲಾಂ ಪ್ರಸ್ತುತ ಪಡಿಸುತ್ತಿರುವ ವಿವಾಹದಲ್ಲಿ ವಧುವಿಗೆ ವರ ನೀಡಬೇಕಾದ 'ಮಹ್ರ್' ಒಂದು ಬಿಟ್ಟರೆ ಆರ್ಥಿಕ ವಿಷಯ ಅಲ್ಲಿ ಗೌಣ ಆಗಿರುತ್ತದೆ. ನಮ್ಮಡೆಯಲ್ಲಿಂದು ಚಲಾವಣೆಯಲ್ಲಿರುವ 'ಡೌರಿ' ಸಂಸ್ಕೃತಿಗೂ ಇಸ್ಲಾಂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ವಧುವಿಗೆ 'ಮಹ್ರ್' ಮತ್ತು ಕೆಲವು ತಿಂಗಳ ಮಟ್ಟಿನ ವಸ್ತ್ರ ಹಾಗೂ ದಿನವೊಂದರ ಖರ್ಚು ನೀಡಲು ಸಾಧ್ಯವಿ್ದ್ದವನು ವಿವಾಹವಾಗಬೇಕು.ಇಲ್ಲದಿದ್ದರೆ ಉಪವಾಸ ಆಚರಿಸಿ ತನ್ನ ಕಾಮದಾಸೆಯನ್ನು ತಣಿಸಿಕೊಳ್ಳಬೇಕೆಂದು ಇಸ್ಲಾಂ ಸ್ಪಷ್ಟವಾಗಿ ಹೇಳಿದೆ.ಸೌಂದರ್ಯ, ಕುಳ,ಆರ್ಥಿಕ,ಧಾರ್ಮಿಕ ವಿಷಯಗಳ ಆಧಾರದಲ್ಲಿ ಮದುವೆಯಾಗುವುದು ಸರ್ವೇಸಾಮಾನ್ಯ. ಆದರೆ ಮುಸ್ಲಿಮರು ಧಾರ್ಮಿಕ ಮೌಲ್ಯಗಳಿಗೆ ಒತ್ತು ಕೊಟ್ಟು ಮದುವೆಯಾಗ ಬೇಕೆಂದು ಪ್ರವಾದಿ (ಸಲ್ಲಲ್ಲಾಹು ಅಲೈವಸಲ್ಲಂ) ಆದೇಶಿಸಿರುವಾಗ ಅದನ್ನು ಪಾಲಿಸಬೇಕಾದುದು ಯಾರು?
 ಇನ್ನು ವಧುವಿಗೆ ಮಹ್ರ್ ಕೊಡಬೇಕೆಂದು ಪವಿತ್ರ ಕುರ್ ಆನ್ ನಲ್ಲಿ ಸ್ಪಷ್ಟಪಡಿಸುತ್ತಿರುವಾಗ ಅದನ್ನು ಮೀರಿ ವರನಿಗೂ ಮಹ್ರ್ ಕೂಡಲೇ ಬೇಕೆಂದು ಹಠ ಹಿಡಿಯುವುದು ಯಾವ ಇಸ್ಲಾಂ?  ಎಂದು ಇಲ್ಲಿ ಕೇಳಲೇ ಬೇಕಾಗುತ್ತದೆ.
      ಇಷ್ಟಕ್ಕೂ ಮದುವೆ 'ವ್ಯವಹಾರ ' ಎಂದ ಮೇಲೆ ಹೆಣ್ಣೆಂಬ ಮಾಲನ್ನು ಪಡೆಯುವವನು ಬೆಲೆ ಪಾವತಸಬೇಕೇ ಹೊರತು ಪೋಷಕರು 'ಮಾಲು' ನೀಡುವುದೊಂದಿಗೆ ಅದರ ಬೆಲೆಯನ್ನೂ ನೀಡಬೇಕೆಂಬುದು ಕಾಡು ನ್ಯಾಯ ಹಾಗೂ ಪ್ರಕೃತಿಗೆ ಎಸಗುವ ಘೋರ ಅಪರಾಧ ಎನ್ನುದೆ ವಿಧಿಯಿಲ್ಲ. ಇನ್ನು ಹೆಣ್ಣನ್ನು ಮದುವೆ ಮಾಡಿ ಕೊಡುವ ವೇಳೆ ಪೋಷಕರ ಹಾಗೂ ಜನ ಸಾಮಾನ್ಯ ರ ನಂಬಿಕೆ ಏನೆಂದರೆ ಈ ಹೆಣ್ಣಾದವಳನ್ನು ಕೊನೆ ತನಕ ಸಂರಕ್ಷಿಸಿಸ ಬೇಕಲ್ಲ , ವರನಾದವನು ಅದನ್ನು ಕೈಯೆತ್ತಿ ಕೊಳ್ಳವುದರಿಂದ ಇಲ್ಲಿ ಪುರುಷರು ಔದಾರ್ಯ ಮರೆಯುತ್ತಾರೆ. ಆದ ಕಾರಣ ಅವನು ಕೇಳಿದಷ್ಟು ಕೊಡದಿರಲಿಕ್ಕೆ ಸಾಧ್ಯನಾ? ಎಂಬ ಮಾನಸಿಕತೆಗೆ ಹೆಚ್ಚಿನವರು ಒಗ್ಗಿ ಹೋಗಿದ್ದಾರೆ.
     ಸತ್ಯ ಹೇಳಬೇಕಂದರೆ ವಿವಾಹವು 'ಬಂಧನ' ಎಂಬ ನಂಬಿಕೆಯಿಂದ ಇದು ಹುಟ್ಟಿಕೊಂಡಿದೆ . ಮದುವೆಯಾಗಿ ವರನ ಮನೆಗೆ ಬರುವ ಮಹಿಳೆ ದಿನ ಪೂರ್ತಿ ಪತಿ ಮನೆಯವರ ಸೇವೆ ಮಾಡುತ್ತಿದ್ದು, ಏನಿಲ್ಲವೆಂದರೂ ದಿನಕ್ಕೆ ರೂ 500 ಕ್ಕೆ ಸರಿದೂಗುವ ಕೆಲಸ ಕಾರ್ಯಗಳನ್ನು ಯಾವುದೇ ದೇ ವೇತನ ಪಡೆಯದೆ ನಿರ್ವಹಿಸುತ್ತಿರುವ ಮಹಿಳೆಗೆ ಪತಿ ಮಹಾಶಯ ಸಂಬಳ ಪಾವತಿಸುವ ಪರಿಪಾಠ ನಮ್ಮಲ್ಲಿದೆಯೇ?
      ತನ್ನ ಹಾಗೂ ಮಕ್ಕಳ ಸರ್ವ ಸೇವೆಯನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಮಾಡಿ ಮುಗಿಸುತ್ತಾಳಾಲ್ಲ ಈ ಮಹಿಳೆ!  ಇಂತಹ ಸಹನೆಯ ಮೂರ್ತಿಯಾದ ಮಹಿಳೆಯರನ್ನು ತನ್ನ ಜೀವನ ಸಂಗಾತಿಯಾಗಿ ಆರಿಸುವಾಗ ತಾನೇ ಆದಷ್ಟು ಧನ ಕನಕಗಳನ್ನು ನೀಡಿ ತನ್ನ ಬಾಳಿಗೆ ಸೇರಿಸಬೇಕೆಂದು ಮಾನವೀಯತೆಯನ್ನು ಪ್ರತಿಪಾದಿಸುತ್ತಿರುವ ಇಸ್ಲಾಂ ಧರ್ಮ ಹೇಳುತ್ತಿರುವಾಗ ಈ ಆಶಯವನ್ನು ಬುಡಮೇಲುಗೊಳಿಸಿ ಇಸ್ಲಾಮಿನ ಪ್ರಮಾಣಗಳನ್ನು ದುರ್ವ್ಯಾಖ್ಯಾನ ಮಾಡಿ ವರದಕ್ಷಿಣೆ ಎಂಬ ಪೈಶಾಚಿಕ ಪದ್ಧತಿಯನ್ನು ಪೋಷಿಸುವವರು ನಿಜವಾಗಿಯೂ ಮಾಡುತ್ತಿರುವುದು ಇಸ್ಲಾಂ ಧರ್ಮಕ್ಕೆ ಅನ್ಯಾಯ ಎನ್ನದೆ ವಿಧಿಯಿಲ್ಲ.
     ಚಿನ್ನ ಮತ್ತು ಮಹಿಳೆ
       ಇತ್ತೀಚೆಗೆ ಏರುತ್ತಲೇ ಇರುವ ಚಿನ್ನದ ಬೆಲೆಯನ್ನು ಕೇಳಿ ತಮ್ಮ ಹೃದಯ ಮಿಡಿತದ ವೇಗವನ್ನು ಹೆಚ್ಚಿಸುತ್ತಿರುವ ಒಂದು ಜನಾಂಗ ಇದ್ದರೆ ಅದು ಮುಸ್ಲಿಮರು ! ಇಂದು ಮುಸ್ಲಿಂ ಮಹಿಳೆಯೆಂದರೆ ಚಿನ್ನದ ಪರ್ಯಾಯ ಎಂಬಂತೆ ಭಾಸವಾಗುತ್ತಿದೆ. ಚಿನ್ನಾಭರಣದ ಅಂಗಡಿಗಳಲ್ಲಿ ಚಿನ್ನ ಖರೀದಿಸಲು ಪರ್ದಾಧಾರಿಣಿಯರ ಪೈಪೋಟಿ ನೋಡಿ ಇಸ್ಲಾಮಿನ ಬಗ್ಗೆ ಅರಿವಿಲ್ಲದವರು ನಮಾಝನ್ನು ಮುಸ್ಲಿಮರಿಗೆ ಕಡ್ಡಾಯಗೊಳಿಸಿದಂತೆ ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಚಿನ್ನಾಭರಣವೂ ಧರಿಸಬೇಕೆಂಬ ನಿಯಮ ಇಸ್ಲಾಮಿನಲ್ಲಿದೆ ಎಂದು ತಪ್ಪು ತಿಳಿದುಕೊಳ್ಳಬಹುದು. ಸತ್ಯವೇನೆಂದರೆ ಚಿನ್ನಾಭರಣ ತೊಡುವುದು ಪುರುಷರಿಗೆ ಇಸ್ಲಾಂ ನಿಷಿದ್ಧಗೊಳಿಸಿದರೆ ಮಹಿಳೆಯರಿಗೆ ಅನುಮತಿ ನೀಡಿದೆಯಷ್ಟೆ!  ಅದು ಧರಿಸಿದರೆ ಯಾವುದೇ ಪುಣ್ಯ ದೊರಕುವುದಿಲ್ಲವೆಂದು ಮಾತ್ರವಲ್ಲ ಬಡವರನ್ನು ಹಂಗಿಸಲು ಹಾಗೂ ತನ್ನ ದರ್ಪ ತೋರಿಸಲು ಚಿನ್ನ ಧರಿಸಿದರೆ ಅದರಿಂದ ಪಾಪವನ್ನು ಕಟ್ಟಿಕೊಳ್ಳಬೇಕಾಗುತ್ತದೆ .
       ಇನ್ನು ವರದಕ್ಷಿಣೆ ವಿರುದ್ಧ ಹುಟ್ಟಿಕೊಂಡ ಜನ ಜಾಗೃತಿಯ ಪರಿಣಾಮ ವರನ ಕಡೆಯಿಂದ ವಾಡಿಕೆಯಲ್ಲಿದ್ದ ಹಣದ ಬೇಡಿಕೆ ಕಡಿಮೆಯಾಗಿದೆಯಾದರೂ ಅದರ ಬದಲು ಚಿನ್ನ ತೊಡಿಸಲು ಒತ್ತಡ ಹೇರುತ್ತಿರುವುದು 'ಹೋದೆಯಾ ಪಿಶಾಚಿ ಬಂದೆಯಾ ಗವಾಕ್ಷಿ' ಎನ್ನುವಂತಾಗಿದೆ.
    ಹಾಗೆನೋಡಿದರೆ ಈ ಬಗ್ಗೆ ಪುರುಷನ್ನು ದೂಷಿಸಿ ಫಲವಿಲ್ಲ, ಒಂದು ಹಂತದ ತನಕ ಇದಕ್ಕೆ ಮಹಿಳೆಯರೇ ಹೊಣೆಗಾರರು ಎಂದು ಹೇಳಲೇಬೇಕಾಗುತ್ತದೆ.
ತಾವು ಹುಟ್ಟಿದ್ದೇ ಚಿನ್ನ ಧರಿಸಲು ಎಂಬ ಮನೋಭಾವ ಮಹಿಳೆಯರಿಂದ ಯಾವಾಗ ದೂರವಾಗುತ್ತದೋ ಆ ತನಕ ಈ ಸಮಸ್ಯೆಗೆ ಪರಿಹಾರವಿಲ್ಲ. ಇಲ್ಲಿ ಮುಸ್ಲಿಂ ಮಹಿಳೆಯರು ಇತರ ಧರ್ಮೀಯ ಮಹಿಳೆಯರಿಂದ ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ. ತನ್ನ ಪೋಷಕರನ್ನು ಭಿಕ್ಷೆ ಬೇಡುವಂತೆ ಮಾಡಿ ತಮ್ಮ ಮನೆಯನ್ನೇ ಅಡವಿಟ್ಟು ತಾನು ಚಿನ್ನ ಧರಿಸಬೇಕೇ? ಎಂಬ ತೀರ್ಮಾನಿಸಬೇಕಾದದ್ದು ಮಹಿಳೆಯರೇ ಆಗಿದ್ದಾರೆ.
     ಒಟ್ಟಿನಲ್ಲಿ ವಿವಾಹಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸಬೇಕಾಗಿದೆ. ಈ ಬಗ್ಗೆ ಧಾರ್ಮಿಕ ಅಧ್ಯಯನಗಳು,ಚರ್ಚಾಗೋಷ್ಟಿಗಳು, ನಿರಂತರ ಆಂದೋಲನಗಳು ,ಜನಜಾಗೃತಿ ಚಳುವಳಿಗಳು ನಡೆಯಬೇಕು. ಉಲಮಾ -ಉಮಾರಾಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ಈ ಸಮಾಜವನ್ನು ಇಂದಿನ ಸುಸ್ಥಿತಿಯಿಂದ ಪಾರು ಮಾಡಬೇಕು. ಪೂರ್ವಿಕರ ಹಾದಿಯನ್ನು ಅವಲಂಬಿಸುವದರೊಂದಿಗೆ ನಾವು ನಮ್ಮ ಬದುಕಿನಲ್ಲಿ ಅಳವಡಿಸಿದ ಎಲ್ಲಾ ಅನಗತ್ಯ ರೂಢಿಗಳನ್ನು ನಿಲ್ಲಿಸಿ, ಕನಿಷ್ಟ ವೈವಾಹಿಕ ಕ್ಷೇತ್ರವಾದರೂ ಸಂಪೂರ್ಣ ಇಸ್ಲಾಮೀಕರಿಸಿದರೆ ನಾವಿಂದು ಅನುಭವಿಸುತ್ತಿರುವ ಯಾತನೆಗಳಿಂದ ಕೊಂಚಮಟ್ಟಿಗೆ ಸುಧಾರಿಸಿಕೊಳ್ಳಬಹುದು.ಹಾಗೆನೇ ವಯಸ್ಸು ಮೀರಿದ ಹೆಣ್ಮಕ್ಕಳು ಮನೆಯಲ್ಲಿ ಕುಳಿತು ರೋಧಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು. ಏನಂತೀರಿ?
  ಇಸ್ಲಾಂ ದುಬಾರಿಯಾ?
       ಇಸ್ಲಾಂ ಧರ್ಮದ ಆಚಾರ-ವಿಚಾರಗಳು ದುಬಾರಿಯಾ? ಈ ಪ್ರಶ್ನೆ ಇಂದು ಜನರನ್ನು ಕಾಡಲು ಶುರುವಾಗಿದೆ.ಈ ಪ್ರಶ್ನೆಯ ಆರಂಭ ಸಮಾಜದ ವಿವಾಹದ ವೇದಿಕೆಯಿಂದ ಎಂಬುದು ವಿಪರ್ಯಾಸ.! ತನ್ನ ಮಗಳ,ಮಗನ ವಿವಾಹ ಕಾರ್ಯ ನೆರವೇರಿಸಲು ಪೋಷಕರು ಇಂದು ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳು,ದುಃಖ ದುಮ್ಮಾನಗಳು ಬೇನೆ ಬೇಗುದಿಗಳು ಇಂತಹ ಒಂದು ಪ್ರಶ್ನೆ ಉದ್ಭವಿಸಲು ಮುಖ್ಯ ಕಾರಣ ಎಂದು ಬೇರೆ ಹೇಳ ಬೇಕಾಗಿಲ್ಲ. ಜೀವನ ಪೂರ್ತಿ ದುಡಿದರೂ ಸರಿದೂಗಿಸಲು ಸಾಧ್ಯವಿಲ್ಲದ ಮೊತ್ತ ಒಂದು ವಿವಾಹಕ್ಕೆ ಖರ್ಚಾಗುತ್ತದೆ. ಇದರ ದುಷ್ಪರಿಣಾಮವೆಂಬಂತೆ ಸಮಾಜದಲ್ಲಿ ಇಸ್ಲಾಂ ಧರ್ಮ ವಿರೋಧಿಸಿದ ಅದೆಷ್ಟೋ ಅನಾಹುತಗಳು ನಡೆಯುತ್ತಿದೆ.ಬಡ್ಡಿ,ದರೋಡೆ,ಗಲಭೆ,ಕೊಲೆ,ವ್ಯಭಿಚಾರ, ನಾಪತ್ತೆ ಪ್ರಕರಣ,ದುಂದು ವೆಚ್ಚ,ನಿಷಿದ್ಧ ಸಂಪಾದನೆ,ಬ್ರೋಕರ್ ಗಳ ಹಾವಳಿ,ಶೈಕ್ಷಣಿಕ ಹಿನ್ನಡೆ,ಭ್ರೂಣ ಹತ್ಯೆ.... ಹೀಗೆ ಹಲವಾರು ಪಿಡುಗುಗಳು ಮೂಲ ವೈವಾಹಿಕ ವೇದಿಕೆಗಳೆಂದರೆ ಅತಿಶಯೋಕ್ತಿಯಾಗಲಾರದು.ಇದಕ್ಕೆಲ್ಲ ಧರ್ಮವನ್ನು ದೂಷಣೆ ಮಾಡುವಂತಿಲ್ಲ.ಏಕೆಂದರೆ ಇಸ್ಲಾಂ ಧರ್ಮದ ಆದೇಶಗಳಿಗೂ ನಮ್ಮಡೆಯಲ್ಲಿ ನಡೆಯುತ್ತಿರುವ ಇಂತಹ  ವಿವಾಹಗಳಿಗೂ ಯಾವುದೇ ಸಂಬಂಧವಿಲ್ಲ.
 ದುಬಾರಿ ಮದುವೆ ಸರಿಯೇ?
     ಮದುವೆ ಎಂದರೆ ಬೆಚ್ಚಿ ಬೀಳುವ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಮರಾದವರು ಅವರ ಸರ್ವೋನ್ನತ ಮಾದರಿ ನೇತಾರ ಹಝ್ರತ್ ಮುಹಮ್ಮದ್ (ಸಲ್ಲಲ್ಲಾಹು ಅಲೈವಸಲ್ಲಂ) ರವರ ವಿವಾಹದ ಬಗ್ಗೆ ಕೊಂಚ ಅವಲೋಕಿಸುವುದು ಮತ್ತು ಅದನ್ನು ತಮ್ಮ ವೈವಾಹಿಕ ಕಾರ್ಯದಲ್ಲಿ ಅಳವಡಿಸಿಕೊಳ್ಳವುದು ಸಮಸ್ಯೆಯ ನಿವಾರಣೆಯ ಹಾದಿಯಲ್ಲಿ ಅತಿದೊಡ್ಡ ಮೈಲಿಗಲ್ಲಾಗಬಹುದು.ಇಸ್ಲಾಂ ಎಂದರೆ ಕೇವಲ ಭಾಷಣ,ಬರಹ,ಸಂಘ,ಸಂಸ್ಥೆ, ಮಸೀದಿ,ಮದ್ರಸ ಹಾಗೂ ಕೆಲವು ಯಾಂತ್ರಿಕ ಆರಾಧನೆಗಳು ಎಂದೂ ತಪ್ಪು ತಿಳಿದುಕೊಂಡವರು ಎಷ್ಟು ಬೇಗ ಇಸ್ಲಾಂ ಧರ್ಮವನ್ನು ಸಮಗ್ರವಾಗಿ ಗ್ರಹಿಸಿ ಅದನ್ನು ಜಾರಿಗೊಳಿಸುತ್ತಾರೋ ಅಷ್ಟು ಬೇಗ ಸಮಾಜದ ಸಮಸ್ಯೆಗಳು ಪರಿಹಾರವಾಗುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೆ ತಲೆಕೆಡಿಸಿಕೊಂಡು ವಾದ,ಪ್ರತಿವಾದ,ಟೀಕೆ,ಟಿಪ್ಪಣಿ, ಹೊ್ೈ ಕೈ ನಡೆಸುತ್ತಿರುವ ಸಮಾಜದ ದುರೀಣರೆನಿಸಿಕೊಂಡವರು ತಮ್ಮದೇ ಸಮಾಜದ ದುರವಸ್ಥೆಯನ್ನು ನೋಡಿ ಕಣ್ಣಿದ್ದು ಕುರುಡರಂತೆ ವರ್ತಿಸುವುದಕ್ಕೆ ಏನನ್ನಬೇಕು.?
     ಪ್ರವಾದಿಯವರ ವಿವಾಹ ಮಾದರಿ ಮುಸ್ಲಿಂ ಜನ ಸಮಾನ್ಯರಲ್ಲಿ ಎಷ್ಟು ಮಂದಿಗೆ ತಿಳಿದಿದೆ? ಸ್ವತಃ ಮಗಳ ವಿವಾಹವನ್ನು ಪ್ರವಾದಿಯವರು ಯಾವ ರೀತಿ ನೆರವೇರಿಸಿದರು? ಎಲ್ಲಾ ವಿಷಯಗಳಲ್ಲೂ ಪ್ರವಾದಿಯವರಲ್ಲಿ ನಿಮಗೆ ಮಾದರಿ ಇದೆಯೆಂದು ಕುರ್ ಆನ್ ಹೇಳುತ್ತಿರುವಾಗ ಪ್ರವಾದಿಯವರ ವಿವಾಹವನ್ನು ಇದರಿಂದ ಹೊರತುಪಡಿಸಲಾಗಿದೆಯೇ? ( ವಿವಿಧ ಉದ್ದೇಶಕ್ಕಾಗಿ ನಾಲ್ಕಕ್ಕಿಂತ ಹೆಚ್ಚು ಮದುವೆಯಾದದ್ದು ಪ್ರವಾದಿಯವರಿಗೆ ಮಾತ್ರ ಸೀಮಿತ ಎಂಬುದು ಬೇರೆ  ಮಾತು)
        ಪ್ರವಾದಿಯವರ ಅಷ್ಟೂ ವಿವಾಹಗಳಲ್ಲಿ ಅತಿಹೆಚ್ಚು ಸತ್ಕಾರ ಏರ್ಪಡಿಸಿದ್ದು ಝೈನಬ (ರ) ರವರನ್ನು ಬವರಿಸುವಾಗ ಮಾತ್ರ.ಆದರೆ ಆ ವಿವಾಹಕ್ಕೆ ಒಂದು ಮೇಕೆಯನ್ನು ದ್ಸಬಹ್ ಮಾಡಲಾಗಿತ್ತು ಎಂದು ಹದೀಸ್ ನಲ್ಲಿ ವರದಿಯಾಗಿದೆ.ಫಾತಿಮಾ( ರ) ರವರ ವಿವಾಹಕ್ಕೆ ಬರೀ ಖರ್ಜೂರದಿಂದ ಸತ್ಕರಿಸಲಾಗಿತ್ತು ಎಂದು ಪುರಾವಗಳಿಂದ ತಿಳಿದು ಬರುತ್ತದೆ.ಆದ್ದರಿಂದಲೇ ಪ್ರವಾದಿ, (ಸಲ್ಲಾಲ್ಲಾಹು ಅಲೈವಲ್ಲಂ) ಹೇಳಿದರು ಅತೀ ಕಡಿಮೆ ವೆಚ್ಚ ಭರಿಸಿದ ವಿವಾಹವು ಅತೀವ ಬರ್ಕತ್ತಿನಿಂದ ಕೂಡಿದೆ. ಎಂದು.

ನಂಡೆ ಪೆಂಙಲ್(ನನ್ನ ತಂಗಿ) ಹೆಣ್ಣೇ ಕೇಳುವರಾರು ನಿನ್ನ ಗೋಳು

ಬೆಳಕು : ಅಲ್ ಅಹ್ಸನ್
ಮೌಲನಾ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು.
....................................................................


ಟ್ಯಾಲಂಟ್ ರಿಸರ್ಚ್ ಫೌಂಡೇಶನ್ ಒಂದು ಹೊಸ ವಿನೂತನ ಅಭಿಯಾನಕ್ಕೆ ಮುಂದಾಗಿತ್ತು. ಕಾರ್ಯಕ್ರಮದ ಉದ್ಘಾಟನೆಗೆ ನನ್ನನ್ನು ಕರೆಯಲಾಗಿತ್ತು.ಮೂವತ್ತು ದಾಟಿದ ಮದುವೆ ವಂಚಿತ ತಂಗಿಯರ ಅಹವಾಲನ್ನು ಸಮಾಜದ ಮುಂದೆ ತರೆದಿಡುವ ಸಾಹಸವಾಗಿತ್ತು ಅದು.ಸಮಾಜದಲ್ಲಿ ನಡೆಯುವ ಅದ್ದೂರಿ ಮದುವೆಯ ಭರಾಟೆ, ಗೌಜಿ ಗದ್ದಲದ ಮದ್ದ್ಯೆ ಅವಗಾಹನೆಗೆ ಒಳಗಾದ ರಕ್ತ ಕಣ್ಣೀರಿನ ಭಯಾನಕ ಕಥೆಗಳನ್ನು ಒಡಲಲ್ಲೇ ಇಟ್ಟು ಕರಗಿ ಹೋದ ಕುಸುಮಗಳ ಕಥೆ. ಕನಸುಗಳು ಕಮರಿ ಹೋದ ಬಯಕೆಗಳು ಬಾಡಿ ಹೋದ ಹೃದಯ ವಿದ್ರಾವಕ ಕದನ ಕುತೂಹಲದ ಘಟನೆಗಳು.ಇಲ್ಲಿ ಪಾತ್ರದಾರಿಗಳು ಬೇರೆ ಯಾರೂ ಅಲ್ಲ ನಮ್ಮದೇ ತಂಗಿಯರು.
ಟ್ಯಾಲಂಟಿನ ಸಕ್ರೀಯ ಕರ್ಯಕರ್ತರಾದ ಅಬ್ದುಲ್ ಹಮೀದ್ ಕಣ್ಣೂರ್ ಜೊತೆ ಎರಡು ಸುತ್ತು ನಡೆಯುತ್ತಾ ಕೆಲವು ಮನೆಗಳ ಬಾಗಿಲುಗಳನ್ನು ತಟ್ಟಿದೆವು.ಮೆಲ್ಲನೆ ಬಾಗಿಲು ತೆರೆದು ಕೊಂಡಾಗ ಕಂಡ ಮುಖಗಳು ಗಾಬರಿಯಿಂದಲೇ ನಮ್ಮನ್ನು ಬರಮಾಡಿಕೊಂಡಿತ್ತು.ಆದರೆ ಅಲ್ಲಿ ನಮ್ಮನ್ನು ಸತ್ಕರಿಸುವುದಕ್ಕಿಂತ ಅವರನ್ನೇ ಮರೆಮಾಚಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತಿದ್ದರು ಕಾರಣ ಅಷ್ಟೊಂದು ತಳಮಳ ಅವರ ವರ್ತನೆಯಲ್ಲಿತ್ತು.ಹೇಗೂ ಸುಧಾರಿಸಿಕೊಂಡು ಅವರೊಟ್ಟಿಗೆ ಕೆಲಕಾಲ ಕಳೆದೆವು. ಅವರು ಹೇಳುವ ಒಂದೊಂದು ಘಟನೆಗಳು ಬಾಣದಂತೆ ಹೃದಯ ವನ್ನು ಸೀಳುವಂತಿತ್ತು.
ಎರಡು ಮಕ್ಕಳನ್ನು ಬಾವಿಗೆಸೆಯಲು ಮುಂದಾದ ವ್ಯಕ್ತಿಯ ಅವಸ್ಥೆಯನ್ನು ಕೇಳಿದಾಗ ನಾನರಿಯದೇ ಕಣ್ಣೀರ ಹನಿಯು ಕೆನ್ನೆಯಿಂದ ಜಾರಿ ಉದುರುತ್ತಿತ್ತು.ಆ ಪಾಪಿಯ ಕೈಗಳಿಂದ ಮಕ್ಕಳನ್ನು ತಂದು ಸಾಕಿದ ಅಕ್ಕಳಿಗೆ ಕಷ್ಟವಾದದ್ದು ಮೊದಲ ಮಗಳ ಮದುವೆಯ ಕಾರ್ಯವಲ್ಲ, ಧಾರೆ ಎರೆದು ಕೊಡಬೇಕಾದ ಆ ಹುಡುಗಿಯ ತಂದೆಯನ್ನು ಮದುವೆ ಮಂಟಪಕ್ಕೆ ಕರೆ ತರುವುದು! ಆದರೂ ಆ ತಂದೆಯ ಡಿಮಾಂಡಿನಂತೆ ನಡೆದುಕೊಳ್ಳಲಾಯಿತು.ಮೊದಲ ಮದುವೆ ನಡೆಯಿತು. ಇದೀಗ ಎರಡನೆಯ ಮದುವೆ ತಯಾರಿಯಲ್ಲಿ ಸಿಕ್ಕಿದ ಪಾರ್ಟಿಯು ಕೊಟ್ಟ ಡಿಮಾಂಡು! ಮೂರು ಲಕ್ಷ. ರುಪಾಯಿಗಳು ಮತ್ತು ಹೆರಿಗೆ ಖರ್ಚಿಗೆ ಒಂದು ಲಕ್ಷ. ಅದು ಮಾತ್ರ ಹೆರಿಗೆ ಸಮಯ ಕೊಟ್ಟರೆ ಸಾಕು ಎಂಬ ಉದಾರತೆಯೂ ಇತ್ತು.
ಹೌದು ಮದುವೆ ಎಂಬುದು ಹಲವರಿಗೆ ಸಂಭ್ರಮ ಸಡಗರದ ಕಾರ್ಯವಾಗಿ ಉಳಿದಿರುವುದಿಲ್ಲ ಬದಲಾಗಿ, ಸಂಕಟ , ಅಪಮಾನ,ದೌರ್ಜನ್ಯ, ಸಾವು ನೋವು, ಕೆರೆ  ಬಾವಿ ,ಸೀಮೆಎಣ್ಣೆ, ಹಗ್ಗ.ಆಸಿಡ್ ,ಗ್ಯಾಸ್ ಸಿಲಿಂಡರಿನ ಕಥೆಯ ವ್ಯಥೆಯಾಗಿ ಮುಂದುವರಿಯುತ್ತಿದೆ.ಸಾಹಿತಿ ಅ.ರ.ಮಿತ್ರರು ಹೀಗೆ ವಿವರಿಸುತ್ತಾರೆ
ವರೋಪಚಾರದ ಸೂಟುಬೂಟುಗಳು
ಉಂಗುರ ಒಡವೆ ಎಲ್ಲಾ ವಸ್ತುಗಳು
ಒಂದನು ಬಿಡದಲೇ ಜೋಡಿಸಿಟ್ಟಿರುವೆ
ಬಸ್ಸಿನ ಲೆಕ್ಕವ ಪೂರ್ತಿ ಗೊಳಿಸಿರುವೆ
      ಬೇಕಾದುದು ಇನ್ನೇನಿದೆ ಹೇಳಿ
       ಹುಡುಗಿಯ ಸುಡಲು ಕೆರೋಸೀನ್ ಸ್ಟೋವೆ?
       ನೀರಲ್ಲಿ ಮುಳುಗಿಸೆ ಪ್ಲಾಸ್ಟಿಕ್ ಕಡಾಯೆ?
       ಎರಚಲು ಮುಖಕ್ಕೆ ಆಮ್ಲ ದ್ರವವೇ?
        ತ್ರಿಶಂಕು ತೋರಿಸೆ ನೇಣಿನ ಹಗ್ಗವೇ?
ಹೌದು ಪ್ರವಾದಿ ನಬಿ ಸುನ್ನತ್ತನ್ನು ಪಾಲಿಸುವ ಮುಸ್ಲಿಮರು ಮದುವೆಯ ವಿಚಾರದಲ್ಲಿ ನಡೆದುಕೊಂಡ ಮೃಗೀಯವರ್ತನೆಯ ಕೆಟ್ಟಪರಿಣಾಮಗಳು.
ಇಂತಹಾ ಕಾರಣಗಳಿಂದ ಮಕ್ಕಳಿರುವಾಗ ಒಣ ಕಡ್ಡಿಗಳಿಗೆ ಬಟ್ಟೆ ಸುತ್ತಿ ಮದುಮಗಳ ಕನಸು ಕಾಣುತ್ತಿದ್ದ,  ಕಿಟಕಿಗೆ ಸಾರಿಯ ತುಂಡನ್ನು ಕಟ್ಟಿ ಆಟದ ಬೊಂಬೆಯನ್ನಿಟ್ಟು ತೊಟ್ಟಿಲಲ್ಲಿ ಹಾಡುತ್ತಿದ್ದ ತಂಗಿಯರು ಅಮ್ಮ ಆಗುವ ಕನಸು ಕಾಣುತ್ತಾ ಕ್ರಮೇಣ ಕನಸು ಬಯಕೆಗಳನ್ನು ಕರಗಿಸಿ ಚಾಪೆಯಾಗಿಸಿ ಕರಗಿ ಕೊರಗಿ ದೇಹವೇ ಸುಕ್ಕುಗಟ್ಟಿ ರೋಗಿಗಳಾಗಿಯೋ ಬುದ್ಧಿ ಸ್ಥಿಮಿತ ಕಳಕೊಂಡವರಾಗಿಯೋ ಗೋಡೆಗಳ ಮಧ್ಧೆ ಬದುಕನ್ನೆ ಬಂದಿಸಿಟ್ಟರು ಇವರೇ ನಮ್ಮ ತಂಗಿಯರು.
ಮನೆಯಲ್ಲಿರುವ ಅಣ್ಣ ತಮ್ಮಂದಿರು ಸಾಕಷ್ಟು ಪ್ರಯತ್ಯ ಮಾಡಿ ಕೈ ಸೋತು ಕೊನೆಗೆ ಅವರೂ ಬಿಟ್ಟು ಬೇರೆ ಕಡೆ ವಾಸ ಬಯಸುತ್ತಾರೆ. ಕಾರಣ ಅವರಿಗೂ ಹೆಣ್ಮಕ್ಕಳಿದ್ದು ಅವರೂ ದೊಡ್ಡವರಾಗುತ್ತಿದ್ದರು.
ಕ್ರಮೇಣ ಬಳ್ಳಿ ಎಲ್ಲರನ್ನು ಸುತ್ತಿಕೊಳ್ಲುವ ಹಂತದಲ್ಲಿ ನೀರು ಮೂಗಿನ ನೇರ ಬಂದಾಗ ತಲೆ ಮೇಲೆ ಹೊತ್ತು ನಡೆದವರನ್ನು ಕಾಲಡಿಗೆ ಹಾಕಿ ಬದುಕುಳಿಯುವ ಪ್ರಯತ್ನದಂತೆ ಮುಂದುವರಿಯುತ್ತದೆ.
ಕಟ್ಟ ಕಡೆಗೆ ಮನೆಯಲ್ಲಿ ತಾಯಿ ಮತ್ತು ಮಗಳು!
ತಂದೆ ತೀರಿಕೊಂಡರು,ಸಹೋದರರು ಮನೆ ಬಿಟ್ಟರು.ತಾಯಿ ರೋಗಿಯಾದರು ಮದುವೆಯ ಆಲೋಚನೆ ಬಿಟ್ಟು ತಾಯಿ ಆರೈಕೆ ಮಾಡುತ್ತಲೇ ಒಂದು ದಿನ ತಾಯಿ ಮರಣದ ಬಾಗಿಲು ಬಡಿವಾಗ ಮನೆಯಲ್ಲಿ ಮಗಳು ಮಾತ್ರ.ಆ ತಾಯಿಯೊಂದಿಗೆ ಮಗಳು ಕೇಳುತ್ತಾಳೆ
ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸಮ್ಮನಿಲ್ಲಯೆ ನಿಲ್ಲಲಾರೆಯಾ
ಮಗಳು ಅಮ್ಮಗೆ ಹೇಳಲು
    ಮರಣ ಭಾಷೆಗೆ ತಪ್ಪಲಾರೆನು
     ಗೂಟ ಹಾಕಿ ಕೂರಲಾರೆನು
    ಇಷ್ಟರಿಂದಲೇ ಪೋಪೆನಲ್ಲಿಗೆ
     ಕಟ್ಟ ಕಡೆಗಿದು ಖಂಡಿತಾ
ಆರ ನೆಲೆಯಲಿ ಕೂರಲಮ್ಮಾ
ಆರ ಸೇರಿ ಬದುಕಲಮ್ಮಾ
ಆರ ಬಳಿಯಲು ಕಳೆಯಲಮ್ಮಾ
ಆರು ನನಗೇ ಹಿತವರು
     ಅಣ್ಣಗಳಿರಾ ತಮ್ಮಗಳಿರಾ
     ನಿಮ್ಮ ತಾಯೊಡ ಹುಟ್ಟುಗಳಿರಾ
     ನಿಮ್ಮತಂಗಿ ಎಂದು ಕಾಣಿರಿ
      ತಬ್ಬಲಿಯ ಈ ಮಗಳನು
ಮುಂದೆ ಬಂದರೆ ಹಾಯಿವರಮ್ಮ
ಹಿಂದೆ ಬಂದರೆ ಒದೆವರಮ್ಮಾ
ನಿನ್ನ ಬಳಗೇ ಕರೆದು ಕೊಳುವೆಯ
ತಬ್ಬಲಿಯ ಈ ಮಗಳನು
ನಂಡೆ ಪೆಂಙಲ್ ಅಭಿಯಾನಕ್ಕೆ ಸಮರ್ಪಣೆ

ಕಣ್ಣೀರಿನ ಕಥೆ ಹೇಳುತ್ತಿದ್ದಾಳೆ 'ನಂಡೆ ಪೆಂಙಳ್'

'ಮನದ ಮಾತು' ಅಲ್ ಅಹ್ಸನ್ ಮಾಸಿಕ
  ಕೆ.ಎಂ.ಎ.ಕೊಡುಂಗಾಯಿ
..........................................

 ಕಣ್ಣೀರಿನ ಕಥೆ ಹೇಳುತ್ತಿದ್ದಾಳೆ 'ನಂಡೆ ಪೆಂಙಳ್'

     'ನಂಡೆ ಪೆಂಙಳ್ '
     ಆ ಹೆಸರಲ್ಲೇ ಅದೇನೋ ಪ್ರೀತಿ,
ಮಮತೆ ,ಕರುಣೆ ಎಲ್ಲವೂ ಇದೆ.ಜೊತೆಗೆ ಪಾಲನೆ, ರಕ್ಷಣೆಯ ಭರವಸಯೂ ಇದೆ. ಹೀಗೆ ಎಲ್ಲವೂ ಅಡಕವಾಗಿರುವ 'ನಂಡೆ ಪೆಂಙಳ್ ' ಅಥವಾ 'ನನ್ನ ಸಹೋದರಿ'ಎಂಬ ಸ್ಪೆಷಲ್ ಅಟ್ರೆಕ್ಷನ್, ಕರುಳಬಳ್ಳಿಯ ಸಂಬಂಧವನ್ನು ನೆನಪು ಮಾಡಿಕೊಟ್ಟು ಸಹೋದರತೆಯ ಸಂಬಂಧವನ್ನು ಭದ್ರವಾಗಿ ಕಟ್ಟುತ್ತದೆ.
     ಪ್ರತಿಯೊಬ್ಬರಿಗೂ ತಂಗಿಯೆಂದರೆ ವರ್ಣನೆಗೆ ನಿಲುಕದ ಸಂಪತ್ತು.ಎಳೆಯದರಲ್ಲಿ ತಂಗಿಯ ಆಟ,ತಂಗಿಯ ಓಟ,ತಂಗಿಯೊಂದಿಗೆ ಊಟ, ತಂಗಿ ನೀರುಣಿಸುವ  ಹೂದೋಟ,ಹೂ ಅರಳಿದಾಗ ಪಿಳಿ ಪಿಳಿ ಕಣ್ ಬಿಟ್ಟ ಅವಳ ನೋಟ,ಮುಂದೆ ಕಲಿಕೆಗೆ ಶುರುವಿಟ್ಟ ಚೂಟಿಯಾದ ಅವಳ ಪಾಠ,ಅದೇ ಹಾದಿಯಲ್ಲಿ ಮಾಡುವ ಸಾಧನೆ,ಶೋಧನೆ ,ಇನ್ನು ವಿವಾಹ ಪ್ರಾಯಕ್ಕೆ ಬಂದಾಗ ಮದುವೆ ಮಾಡಿಕೊಟ್ಟು ಗಂಡನ ಮನೆಗೆ ಕಳುಹಿಸಿ ಕೊಡುವಾಗ ತಂದೆ ತಾಯಿಯ ಜೊತೆಗೆ ಅಣ್ಣನ ಕಣ್ಣಂಚಿನಲ್ಲೂ ಜಿನುಗುವ ಕಣ್ಣೀರು,ವಿದಾಯದ ವೇದನೆ,ವಿರಹದ ಖಾಲಿತನ ,ಮುಂದೆ ಗಂಡನೊಂದಿಗೆ ತವರಿಗೆ ಬರುವಾಗ ಆಗುವ ಸಂತೋಷ,ನನಗಾಗಿ,ನನ್ನ ಮದುವೆಗಾಗಿ ತಂದೆ ತಾಯಿಯೊಂದಿಗೆ ಕೈ ಜೋಡಿಸಿ ದುಡಿದ ಅಣ್ಣ,ನನ್ನನ್ನು 'ತಂಗಿ ಪಾರಿವಾಳ'ದ ರೀತಿ ಮುದ್ದಿನಿಂದ ಲಾಲಿಸಿ ಬೆಳೆಸಿದ ಅಣ್ಣ ಎಂಬ ಪ್ರೀತಿ ,ಗೌರವದೊಂದಿಗೆ ಅವಳು ನೋಡುವ ಪರಿ,ಮುಂದೆ ಮಕ್ಕಳಾದಾಗ 'ಇಕೋ ನಿನ್ನ ಮಾವ' ಎಂದು ಮಕ್ಕಳಲ್ಲಿ ಹೇಳಿಕೊಟ್ಟು ಮಕ್ಕಳಲ್ಲೂ ಪ್ರೀತಿ, ಗೌರವ ತುಂಬಿ ಬಿಡುವ 'ನಂಡೆ ಪೆಂಙಳ್' ಅಥವಾ 'ನನ್ನ ಸಹೋದರಿ' ಅಣ್ಣನ ಪಾಲಿಗೆ ಉತ್ಸಾಹದ ಚಿಲುಮೆ,ಬದುಕಿನೊಳು ಪೂರ್ತಿಯಾಗಿ ಬೆಸೆದು ಕೊಳ್ಳುವ ಪ್ರೀತಿ,ಮಮತೆಯ ಸಲುಗೆಯ ರಕ್ತ ಸಂಬಂಧ.....
    ವಾಹ್, ಆ ಕರುಳ ಬಳ್ಳಿಯ ಪ್ರೀತಿಯ ಸಂಬಂಧ ಎಣಿಕೆಗೆ ಸಿಗದು,ಬರಹ ಅಥವಾ ಮಾತಿನ ವರ್ಣನೆಗೂ ನಿಲುಕದು. ಆ ತೆರನಾದ ಶಕ್ತಿ ಆ ಒಡ ಹುಟ್ಟಿದ ಸಂಬಂಧದಲ್ಲಿ ಇದೆ.ಅದೇ ಕಾರಣಕ್ಕೆ ಪ್ರತಿಯೊಬ್ಬ ಅಣ್ಣ ,ತಂಗಿಯ ಏಳಿಗೆಯನ್ನು ಬಯಸುತ್ತಾನೆ, ಅವಳ ಮದುವೆ,ಅವಳ ದಾಂಪತ್ಯ ವೆಲ್ಲವೂ ಮಂಗಳಕರವಾಗಿ ನಡೆಯ ಬೇಕೆಂಬ ಕನಸು ತಂದೆ ತಾಯಿಯಷ್ಟೇ ಅಣ್ಣನಿಗೂ ಇರುತ್ತದೆ, ಅದು ಇರಬೇಕು ಕೂಡ.ಅಂತಹ ಬಿಟ್ಟಿರಲಾರದ ಪ್ರೀತಿಯ,ಒಳಿತಿನ ಸೌಹಾರ್ಧತೆಯ ಕೌಟುಂಬಿಕ ಸಂಬಂಧ ಇರಬೇಕೆಂದು ಪವಿತ್ರ ಧರ್ಮವೂ ಕಲಿಸಿಕೊಡುತ್ತದೆ.
       ಒಟ್ಟಿನಲ್ಲಿ ತಂಗಿಯ ಮದುವೆ, ಅಣ್ಣನ ಮದುವೆಯೆಂದರೆ ಪರಸ್ಪರ ಹೇಳಿತೀರದ ಸಂಭ್ರಮ,ಉತ್ಸಾಹ ಎಲ್ಲವೂ ಆಗಿರುತ್ತದೆ .ಆದರೆ ಅಂತಹ ಸಂಭ್ರಮ, ಸಂತಸವನ್ನು ಅನುಭವಿಸುವ ಸೌಭಾಗ್ಯ ದೊರೆಯದ ಅದೆಷ್ಟು ತಂಗಿಯಂದಿರು ಈ ಸಮಾಜದಲ್ಲಿ ಇದ್ದಾರೆ ಗೊತ್ತಾ, ನಮ್ಮ ಮನೆ ಮಗಳು ಮದುವೆ ಮಾಡಿಕೊಂಡು ಗಂಡನ ಕೈ ಹಿಡಿದು ಸಂತೋಷದಿಂದ ಸಾಗುವಾಗ ಆ ಜೋಡಿಯ ಸಂಭ್ರಮೋಲ್ಲಸದ ನಡೆಯನ್ನು ಪಕ್ಕದ ಮನೆಯೊಳಗಿನಿಂದ ಕಿಟಕಿಯ ಮೂಲಕ ಇಣುಕಿ ನೋಡಿ 'ಅವಳಿಗಿಂತ ವಯಸ್ಸಿನಲ್ಲಿ ಹಿರಿಯವಳಾದ ನನಗೆ ಬಡತನದ ಕಾರಣದಿಂದ ಅಂತಹ ದಾಂಪತ್ಯದ ಭಾಗ್ಯ ದೊರೆಯಲಿಲ್ಲ'ವೆಂದು ನೊಂದುಕೊಂಡು ಮನದಾಳದ  ಬಯಕೆಗಳನ್ನು ಅದುಮಿಟ್ಟು ಕಣ್ಣಂಚಿನಲ್ಲಿ ನೀರು ತುಂಬಿಸಿಕೊಂಡು ಮೌನ ರೋದನ ನಡೆಸುವ  ಮೂವತ್ತರ ಹರೆಯ ಮೀರಿದ ನಮ್ಮದೇ ಸಮುದಾಯದ ಸಹೋದರಿಯರು ಎಷ್ಟಿಲ್ಲ ,ಆ ಬಗ್ಗೆ ನಾವು ಯೋಚಿಸಿದ್ದು ಇದೆಯಾ? ಆ ಹೆಂಗಳೆಯರ ಕಮರಿದ ಕನಸು,ಕರಟಿದ ಬಯಕೆಗಳ ಕಣ್ಣೀರಿನ ಕಥೆ ಏನಾದರೂ ನಮಗೆ ಗೊತ್ತಿದೆಯಾ?
    .ಇಲ್ಲಿ ಕೇಳಿ, ಸಮಾಜ ಸೇವಾ ಸಂಘಟನೆ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ನಡೆಸಿದ ಸಮೀಕ್ಷೆ ಹಾಗೂ ' ನಂಡೆ ಪೆಂಙಳ್ ' (ನನ್ನ ತಂಗಿ) ಎಂಬ ಹೆಸರಿನಲ್ಲಿ ದ.ಕ.ಜಿಲ್ಲೆಯಾದ್ಯಂತ ನಡೆಸಿದ ಅಭಿಯಾನವು ಇಡೀ ಸಮಾಜದ ಕಣ್ಣೀರ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಸಮಾಜದ ಮುಂದೆ ತೆರೆದಿಟ್ಟಿದೆ. ' ನಂಡೆ ಪೆಂಙಳ್ ' ತನ್ನ ಕರುಣಾಜನಕ ಕಥೆಯನ್ನು ಅನಾವರಣ ಗೊಳಿಸಿದ್ದಾಳೆ !
        ಮದುವೆ,ಹಾಗೂ ಕುಟುಂಬ ಕಟ್ಟುವ ಕನಸು,ಬಯಕೆಗಳು ಇಲ್ಲದವರು ಯಾರಿದ್ದಾರೆ ಹೇಳಿ, ಅಂತದರಲ್ಲಿ ವಯಸ್ಸು ಮೂವತ್ತು ದಾಟಿದ ಸಾವಿರಕ್ಕೂ ಮಿಕ್ಕಿದ ಹೆಣ್ಮಕ್ಕಳು ನಮ್ಮ ಜಿಲ್ಲೆಯಲ್ಲಿದ್ಧಾರೆ ಎಂದರೆ ಏನೂ ತಮಾಷೆನಾ? ಅದೂ ಮುಸ್ಲಿಮರಲ್ಲಿ ಅತೀ ಹೆಚ್ಚು ಶ್ರೀಮಂತರು ಹಾಗೂ ಸುಶಿಕ್ಷಿತರು ಇರುವ ಈ ಜಿಲ್ಲೆಯ ಸಮುದಾಯದ ದುರಂತ ಕಥೆ ಹೀಗಾದರೆ ಅದಕ್ಕಿಂತ ದೊಡ್ಡ ನಾಚಿಕೆ ಬೇರೆನಿದೆ ಹೇಳಿ? ಅಷ್ಟಕ್ಕೂ ನಮ್ಮಲ್ಲಿ ನಡೆಯುವ ಅದ್ದೂರಿ ಮದುವೆ, ಪಾರ್ಟಿಗಳಿಗೇನು ಕಡಿಮೆ ಇದೆ? ಸಂಘ, ಸಂಸ್ಥೆಗಳ ವಾರ್ಷಿಕೋತ್ಸವ,ಮತ್ತಿತರ ಕಾರ್ಯಕ್ರಮಗಳಿಗೆ ನಾವು ಮಾಡುವ ಖರ್ಚಿಗಳೆಷ್ಟು? ಯಾವುದರಲ್ಲಿ ಇಲ್ಲಿ ನಮ್ಮವರ ಆಡಂಭರಕ್ಕೆ ಕಡಿಮೆಯಿದೆ ಹೇಳಿ?
         ಆದರೂ ಯಾಕೆ ಕಾದು ಕಾದು ಮದುವೆಯ ಕನಸನ್ನೇ ಕೈಬಿಟ್ಟು, ಬಯಕೆಗಳಿಗೆ ವಿದಾಯ ಹೇಳಿ ನಮ್ಮ ಹೆಣ್ಮಕ್ಕಳು ಕಣ್ಣೀರಲ್ಲಿ ಕಳೆದು ಖಿನ್ನತೆಗೊಳಗಾಗ ಬೇಕಾದ ದುರಂತ ಪರಿಸ್ಥಿತಿ ಬಂತು? ಮಕ್ಕಳ ಬಗ್ಗೆ ಚಿಂತಿಸಿ,ಚಿಂತಿಸಿ ಕೊರಗಿ ಕೊರಗಿ ಕಣ್ಮುಚ್ಚ ಬೇಕಾದ ಪರಿಸ್ಥಿತಿ ಹೆಣ್ಣು ಹೆತ್ತವರಿಗೆ ಯಾಕೆ ಬಂತು?
      ಇದೇನು ಸಿಲ್ಲಿ ಎಂದು ಕೊಂಡಿರಾ,  ಆಲೋಚಿಸ ಬೇಕಾದ ವಿಚಾರ ವಲ್ಲವೇ ಇದು?
      ಯಾಕೆ ಸಮಾಜ ಆಲೋಚಿಸುತ್ತಿಲ್ಲ,  ಸಮಾಜಕ್ಕೆ ನೆರವಾಗುವ ಧ್ಯೇಯದೊಂದಿಗೆ ಹುಟ್ಟಿಕೊಳ್ಳುವ ಸಂಘ,ಸಂಸ್ಥೆಗಳಾಗಲಿ, ತಳಮಟ್ಟದಲ್ಲಿ ಸಮಾಜದ ಪ್ರಗತಿಗಾಗಿಯೇ ಕಟ್ಟಿಕೊಳ್ಳುವ ಮೊಹಲ್ಲಾ- ಜಮಾಅತ್ ಸಮಿತಿಗಳೇಕೆ ತಮ್ಮ ಧ್ಯೇಯವನ್ನು ಮರೆತು ಕೇವಲ ಕಾಟಾಚಾರದ ಸೇವೆಗೆ ಸೀಮಿತಗೊಳ್ಳತ್ತದೆ? ಅದೇ ನಮ್ಮಲ್ಲಿ  ಆ ಸಂಘ -ಸಂಸ್ಥೆಗಳ,ಜಮಾಅತ್ ಗಳ ಅಧಿಕಾರ ಗಿಟ್ಟಿಸಿಕೊಳ್ಳಲು ಎಷ್ಟು ಪೈಪೋಟಿ ನಡೆಯುತ್ತಿಲ್ಲ, ಥೇಟು ರಾಜಕೀಯದಂತೆ ಚುನಾವಣೆ ನಡೆಯುವ ಹಾಗೂ ಮತ ಯಾಚನೆ ನಡೆಸುವ, ಅಷ್ಟೇ ಅಲ್ಲ,ಆ ಹೆಸರಲ್ಲಿ ಜಂಗಿ ಕುಸ್ತಿ ನಡೆಯುವ ಪರಿಸ್ಥಿತಿ ನಮ್ಮ ಕೆಲವೊಂದು ಮೊಹಲ್ಲಾ, ಸಂಘ-ಸಂಸ್ಥೆಗಳಲ್ಲಿ ಇಂದು ಸಾಮಾನ್ಯವಾಗಿ ಬಿಟ್ಟಿಲ್ಲವೇ, ಆದರೂ ಯಾಕೆ ಸಮಾಜವನ್ನು ಮೇಲೆತ್ತುವುದರ ಬಗ್ಗೆ ಯೋಚಿಸುತ್ತಿಲ್ಲ, , 'ಉತ್ತಮ ಸಮಾಜ' ಎಂದು ಪವಿತ್ರ ಕುರ್ ಆನಿನಿಂದ ಕರೆಸಿಕೊಂಡ ನಾವು ಯಾಕೆ ಸರ್ವ ಕ್ಷೇತ್ರಗಳಲ್ಲೂ ಹಿನ್ನಡೆ ಅನುಭವಿಸುತ್ತಿದ್ದೇವೆ, ದೂರದ ಎಲ್ಲೋ ಸಮಾಜಕ್ಕೆ ಅನ್ಯಾಯವಾದಾಗ ಗಂಟೆಗಟ್ಟಲೆ ಆ ಬಗ್ಗೆ ಮಾತನಾಡುವ, ಕಣ್ಣೀರಿಡುವ ನಮಗೆ ಯಾಕೆ ನಮ್ಮದೇ ಮೊಹಲ್ಲಾದಲ್ಲಿ ಬಡತನದಿಂದ ದಿನದ ಖರ್ಚು ಹಾಗೂ ರೋಗ ಚಿಕಿತ್ಸೆಗಳಿಗೂ ಗತಿಯಿಲ್ಲದೆ ಕಂಗಾಲಾಗಿರುವ ಕುಟುಂಬಗಳ ಬಗ್ಗೆ, ಹಾಗೂ ಕಣ್ಣೀರಿಡುವ ಹೆಣ್ಮಕ್ಕಳ ಬಗ್ಗೆ ಯೋಚಿಸುತ್ತಿಲ್ಲ,? ಅತ್ತ ಹತ್ತೊಂಬತ್ತು ಶೇಖಡಾ ಮುಸ್ಲಿಮರಿರುವ ಅದರಲ್ಲೂ ಬರೋಬ್ಬರಿ ನೂರಕ್ಕೂ ಮಿಕ್ಕಿದ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿರುವ ನಲ್ವತ್ತರಷ್ಟು ಕ್ಷೇತ್ರಗಳಲ್ಲಂತೂ ಸ್ವತಃ  ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ಆಯ್ಕೆ ಮಾಡಬಲ್ಲ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಅರವತ್ತಕ್ಕೂ ಮಿಕ್ಕಿದ ಶಾಸಕರನ್ನು ಹೊಂದಿದ್ದ ಮುಸ್ಲಿಮರು ಇಂದು ಬರಿ ಇಪ್ಪತ್ತು ಚಿಲ್ಲರೆಗೆ ಬಂದು ಬಿಟ್ಟಿದ್ದರೆ ಅದು ಅಲ್ಲಿನ ಮುಸ್ಲಿಮರ ಒಗ್ಗಟ್ಟಿನ ಕೊರತೆ ಎಂದು ವಿಶ್ಲೇಷಣೆ ನಡೆಸುವ ನಾವೇನು ಒಗ್ಗಟ್ಟಿನಲ್ಲಿ ಮಾದರಿಯಾಗಿದ್ದೇವೆ ಅಂದು ಕೊಂಡಿರಾ? ನಾಳೆ ನಮ್ಮಲ್ಲಿ ಚುನಾವಣೆ ನಡೆದರೂ ನಮ್ಮ ಪರಿಸ್ಥಿತಿ ಅದಕ್ಕಿಂತ ಭಿನ್ನವಲ್ಲ,! ಅಷ್ಟೊಂದು ಭಿನ್ನಮತ,ಒಳ ಜಗಳ ನಮ್ಮಲ್ಲಿ ಇಲ್ಲವೇ? ಇಲ್ಲ ವೆನ್ನಲು ಯಾರಿಗೆ ಸಾಧ್ಯವಿದೆ ಹೇಳಿ? ಏನಿಲ್ಲವೆಂದರೂ ಮೊಹಲ್ಲಾ ಜಮಾಅತ್ ಗಳ,ಸಂಘ-ಸಂಸ್ಥೆಗಳ  ಅಧಿಕಾರ,ಪ್ರತಿಷ್ಟೆಗಳಿಗಾದರೂ ಜಗಳವಾಡಿ ಸುದ್ದಿಯಾಗುತ್ತೇವೆ. ಅದೇ ಪುಟ್ಟ ಕೇರಳಕ್ಕೆ ಬಂದರೆ ಅಲ್ಲಿನ ಹೆಚ್ಚಿನ ಮುಸ್ಲಿಮರು ಹಿಂದಿನ ಕಾಲದಿಂದಲೇ ಧಾರ್ಮಿಕವಾಗಿ 'ಸಮಸ್ತ'ದ ಅಧೀನದಲ್ಲಿ ಒಗ್ಗೂಡಿದರೆ ರಾಜಕೀಯವಾಗಿ ಪಾಣಕ್ಕಾಡ್ ಸಾದಾತ್ ಗಳ ಸಮರ್ಥ ನಾಯಕತ್ವದಡಿ ಒಗ್ಗೂಡಿದರ ಫಲವಾಗಿ ಇಂದು ದೇಶದಲ್ಲೇ ಇತರ ಕಡೆಗಳಿಗಿಂತ ಅವರು  ಒಂದಿಷ್ಟು ಅಭಿವೃದ್ಧಿ ಪಥದಲ್ಲಿ ಇದ್ದಾರೆ ಎಂದರೆ ತಪ್ಪಲ್ಲ.
      ಅದಿರಲಿ, ಕಾಲದ ಗೋಡೆ ಬರಹ ಅರ್ಥಮಾಡಿ ಕೊಂಡಾದರೂ ಸಮಾಜದ ಏಳಿಗೆಗಾಗಿ ಭಿನ್ನತೆ ಮರೆತು ಒಗ್ಗೂಡುವುದು ಅನಿವಾರ್ಯ, ಇದು ಎಲ್ಲರಿಗೂ ಅರ್ಥವಾದರೆ ಒಳ್ಳಯದು. ಈ ಒಗ್ಗಟ್ಟು,ಹಾಗೂ ಸಾಮುದಾಯಿಕ ಕಾಳಜಿಗಳಿಂದಲೇ ಸಮಾಜವನ್ನು ಮೇಲೆತ್ತಲು ಸಾಧ್ಯ. ಆಗ ಬಡತನ ಮುಕ್ತ ಸಮಾಜ ಕಟ್ಟಬಹುದು, ವರದಕ್ಷಿಣೆ ರಹಿತ ಸಮಾಜ ರೂಪಿಸ ಬಹುದು,ಮದುವೆಯ ಹರೆಯ ಮೀರಿ ಹೆಣ್ಮಕ್ಕಳು ಮನೆಯಲ್ಲಿ ಉಳಿಯುವುದನ್ನು ತಪ್ಪಿಸಬಹುದು,ಕೆಡುಕು ಮುಕ್ತ ಮಾದರಿ ಮೊಹಲ್ಲಾ ಕಟ್ಟಬಹುದು. ಸ್ವಸ್ಥ ನಾಡು, ಸ್ವಸ್ಥ ಸಮಾಜ ರೂಪಿಸ ಬಹುದು.
       ಅಂದಹಾಗೆ ಇದೀಗ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ನವರು ಮೂವತ್ತು ದಾಟಿಯೂ ಇನಿಯನ ಮುಖ ಕಾಣದೆ ಕಣ್ಣೀರಲ್ಲಿ ಕಳೆಯುತ್ತಿರುವ ಹೆಣ್ಮಕ್ಕಳ ಸಮೀಕ್ಷೆಯಲ್ಲಿ ತೊಡಗಿದ್ದಾರಲ್ಲ,ಆ ಅಭಿಯಾನದಲ್ಲಿ ಪ್ರತಿ ಯೊಬ್ಬರೂ ಕೈಜೋಡಿಸಬೇಕಿದೆ.ಈಗಾಗಲೇ ಹಲವಾರು ಜಮಾಅತ್ ಗಳಿಗೆ ತೆರಳಿ ಜಮಾಅತ್ ಸಮಿತಿಗಳ ಸಹಕಾರದೊಂದಿಗೆ ಈ ಅಭಿಯಾನದಲ್ಲಿ ಟ್ಯಾಲೆಂಟ್ ನ ತಂಡ ಕಾರ್ಯ ಪ್ರವರ್ತವಾಗಿದೆ. ಈಗಾಗಲೇ ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಿ ಹತ್ತು ಹಲವು ಸಮಾಜ ಸೇವೆಯಿಂದ ಮನೆಮಾತಾಗಿರುವ ಸಮಾಜದ ಹಿತ ಚಿಂತಕ ರವೂಫ್ ಪುತ್ತಿಗೆ ಸ್ಥಾಪಕ ಅಧ್ಯಕ್ಷರಾಗಿರುವ ಮಾದರಿ ಸಂಘಟನೆ ಟಿ.ಆರ್ .ಎಫ್., ರಪೀಕ್ ಮಾಸ್ಟರ್,ರಿಯಾಝ್ ಕಣ್ಣೂರ್, ಹಮೀದ್ ಕಣ್ಣೂರ್, ಮುಹಮ್ಮದ್ ಯು.ಬಿ. ಹೀಗೆ... ಸಮಾಜ ಸೇವೆಯನ್ನೇ ಬದುಕಾಗಿಸಿಕೊಂಡ ಹಲವಾರು ಕಾರ್ಯಕರ್ತರಿಂದ ಸಮಾಜ ಹೆಮ್ಮೆ ಪಡುವ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು,ಇದೀಗ ''ನಂಡೆ ಪೆಂಙಳ್' ಎಂಬ ಅಭಿಯಾನ ನಡೆಸುತ್ತಿದೆ. ಇಷ್ಟಕ್ಕೂ ಕೇವಲ ಕಾಟಚಾರದ ಅಭಿಯಾನಕ್ಕಷ್ಟೇ ಸೀಮಿತ ಗೊಳ್ಳದೆ, ಆ ಮೂಲಕ ಬಡ ಹೆಣ್ಮಕ್ಕಳ ಮದುವೆ ಮಾಡಿಸಿಕೊಡುವ,ಕಮರಿದ ಕನಸಿಗೆ ಕಾವು ಕೊಡುವ,ಬತ್ತಿದ ಬಯಕೆಗಳಿಗೆ ಜೀವ ತುಂಬುವ ಪುಣ್ಯಕಾರ್ಯಕ್ಕೆ ಸಮಾಜದ ಹಲವಾರು ಒಳ್ಳೆಯ ಮನಸ್ಸಿನ ಶ್ರೀಮಂತರನ್ನು ಹಾಗೂ ಸಮಾಜ ಸೇವಾ ಸಂಘಟನೆಗಳನ್ನು ಸೇರಿಸಿಕೊಂಡು ಕಾರ್ಯಪ್ರವರ್ತವಾಗಿದೆ.ಈಗಾಗಲೇ ಹಲವರೊಂದಿಗೆ ಸೇರಿಕೊಂಡು ಬಹಳಷ್ಟು ಸಾಮೂಹಿಕ ವಿವಾಹ ಸಂಘಟಿಸಿರುವ ನೌಶಾದ್ ಹಾಜಿ ನೇತೃತ್ವದಲ್ಲಿ 'ನಂಡೆ ಪೆಂಙಳ್' ಎಂಬ ಹೆಸರಿನ ಸ್ವಾಗತ ಸಮಿತಿಯೂ ರಚಿಸಲಾಗಿದ್ದು, ಈ ಎಲ್ಲರು ಸೇರಿಕೊಂಡು ನಡೆಸುವ ಈ 'ನಂಡೆ ಪೆಂಙಳ್' (ನನ್ನ ಸಹೋದರಿ) ಎಂಬ ಈ ಅಭಿಯಾನದಲ್ಲಿ ನಾವು ಕೂಡ ಕೈ ಜೋಡಿಸೋಣ. ನಮ್ಮ ಮೊಹಲ್ಲಾ-ಜಮಾಅತ್ ಗಳಲ್ಲೂ ಆ ಬಗ್ಗೆ ಪ್ರಚಾರ,ಚರ್ಚೆಗಳು ನಡೆಯಲಿ ಆ ಮೂಲಕ ಸಮಾಜದಲ್ಲಿ ಅದೊಂದು ಕ್ರಾಂತಿಯಾಗಲಿ... ಇಲ್ಲದಿದ್ದರೆ ಮುಂದಕ್ಕೂ ಮದುವೆಯ ಪ್ರಾಯ ದಾಟಿದ ಸಹೋದರಿಯರು ಮನೆಯ ಮೂಲೆಯಲ್ಲಿ ಕುಳಿತು ಕಣ್ಣೀರಿಟ್ಟು ರೋಧಿಸುವಳು..ಆ ರೋದನ,ಆ ಕಣ್ಣೀರು ಇಡೀ ಸಮಾಜಕ್ಕೆ ದುರಂತ ಹಾಗೂ  ಶಾಪವಲ್ಲದೆ ಮತ್ತೇನು?
  ಅದಕ್ಕಿಂತ ಮೊದಲು ಜಾಗೃತರಾಗೋಣ.