ಜಗತ್ತನ್ನೇ ಬದಲಾಯಿಸಿದ ಮುಸ್ಲಿಂ ಸಂಶೋಧನೆಗಳು

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವು ನಾಗಾಲೋಟದಲ್ಲಿ ಮುನ್ನುಗುತ್ತಿರುವಾಗ ಈ ಎಲ್ಲಾ ಬದಲಾವಣೆಗಳಲ್ಲಿ ಮುಸ್ಲಿಂ ಜಗತ್ತಿನ ಪಾಲುದಾರಿಕೆಯು ಬಹಳ ಪ್ರಮುಖ ಪಾತ್ರವಹಿಸಿದೆ ಎಂಬುವುದನ್ನು ಈ ಜಗತ್ತಿನ ಬಹುತೇಕ ಜನರು ತಿಳಿಯದೇ ಹೋಗಿದ್ದಾರೆ.
ಉದ್ದೇಶಪೂರ್ವಕವೋ, ಅಚಾತುರ‍್ಯದಿಂದಲೋ ಇಸ್ಲಾಮಿನ ಇತಿಹಾಸ ಪುಟಗಳಿಂದ ಮರೆಯಾಗಿ ಹೋಗಿರುವ ಕೆಲವೊಂದು ಮುಸ್ಲಿಂ ಸಂಶೋಧನೆಗಳು ಬೆಳಕಿಗೆ ತರುವ ಪ್ರಯತ್ನ ಇದಾಗಿದೆ. ನಾವು ಪ್ರತಿ ನಿತ್ಯ ಸೇವಿಸುವ ಕಾಫಿಯಿಂದ ಹಿಡಿದು, ಲಕ್ಷಾಂತರ ಜನರಿಗೆ ಅತ್ಯುನ್ನತ ಅವಿದಾಭ್ಯಾಸವನ್ನು ಧಾರೆ ಎರೆಯುವ ವಿಶ್ವವಿದ್ಯಾನಿಲಯವೆಂಬ ಶೈಕ್ಷಣಿಕ ವ್ಯವಸ್ಥೆಯವರೆಗೂ ಜಗತ್ತಿನ ಬದಲಾವಣೆಯಲ್ಲಿ  ಪ್ರಮುಖ ಪಾತ್ರವಹಿಸಿದ ವಿವಿಧ ರಂಗಗಳಲ್ಲಿ ಅರಬ್ಬನ್ನರ ಸಾಧನೆಯು ಪ್ರಶಂಸನೀಯವಾಗಿದೆ. ಅವುಗಳ ಕುರಿತ ವಿವರ ಇಲ್ಲಿದೆ....

ಕಾಫಿ
ಜಗತ್ತಿನಾದ್ಯಂತ ಜನರು ದಿನಕ್ಕೆ ಸುಮಾರು ೧,೬೦೦,೦೦೦,೦೦೦ ಕಪ್ ಕಾಫಿ ಕುಡಿಯುತ್ತಾರೆ. ಕೋಟ್ಯಂತರ ಜನರಿಗೆ ಇದು ದಿನನಿತ್ಯದ ಸಂಗಾತಿ ಯಾಗಿದ್ದರೂ, ಜೀವನದಲ್ಲಿ ಸಾಮಾನ್ಯವೆ ನಿಸುವಷ್ಟು ಸಹಜವಾಗಿ ಬಿಟ್ಟಿರುವ ಈ ಪಾನೀಯವನ್ನು ಕಂಡು ಹಿಡಿದದ್ದು ಮುಸ್ಲಿಮರು ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಾರದು.
ಐತಿಹಾಸಿಕ ದಾಖಲೆಗಳ ಪ್ರಕಾರ ಕ್ರಿ.ಶ. ೧,೪೦೦ರ ಸುಮಾರಿಗೆ ಅರೇಬಿಯ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿರುವ ಯೆಮೆನ್ನಲ್ಲಿ ಕಾಫಿ ಎಂಬ ಒಂದು ಪೇಯ ತುಂಬಾ ಜನಪ್ರಿಯವಾಗಿತ್ತು. ಒಬ್ಬ ಕುರುಬ (ಕೆಲವರು ಯೆಮೆನ್‌ನಲ್ಲಿ ಎಂದು ಹೇಳುತ್ತಾರೆ ಮತ್ತು ಕೆಲವರು ಇಥಿಯೋಪಿಯಾದಲ್ಲಿ ಎಂದು ಹೇಳುತ್ತಾರೆ) ಕುರಿಗಳನ್ನು ಮೇಯಿಸು ವಾಗ ಒಂದು ವಿಷಯ ಆತನ ಗಮನಕ್ಕೆ ಬಂತು. ಅದೆಂದರೆ, ನಿರ್ದಿಷ್ಟವಾದ ಒಂದು ಗಿಡದ ಬೀಜಗಳನ್ನು ತಿಂದಾಗ ಆಡುಗಳು ಉಲ್ಲಸಿತವಾಗಿ ನೆಗೆದಾಡುತ್ತವೆ ಎಂಬುದು. ಆತನು ತಾನೇ ತಿಂದು ನೋಡಿ ಪ್ರಯೋಗ ಮಾಡುವ ಧೈರ್ಯ ತೋರಿದ. ಅದನ್ನು ತಿಂದಾಗ ಒಂದು ರೀತಿಯ ಶಕ್ತಿ ಮತ್ತು ಉತ್ಸಾಹ ಸಂಚಾರವಾದಂತಾಯಿತು. ನಂತರದ ದಿನಗಳಲ್ಲಿ ಕಾಫಿ ಬೀಜಗಳನ್ನು ಹುರಿದು ನೀರಿನಲ್ಲಿ ನೆನೆಸಿ, ಶಕ್ತಿಶಾಲಿಯಾದ ಒಂದು ಪೇಯವನ್ನು ತಯಾರಿಸಿ ಕುಡಿಯುವ ಸಂಪ್ರದಾಯವೇ ಬೆಳೆಯಿತು. ಹೀಗೆ ಕಾಫಿಯ ಜನನವಾಯಿತು.
 ಈ ಕುರುಬನ ಕಥೆ ನಿಜವೋ ಅಲ್ಲವೋ ಎಂಬುದನ್ನು ಕಡೆಗಣಿಸಿದರೂ, ಕಾಫಿಯು ಯಮನ್‌ನ ಎತ್ತರ ಪ್ರದೇಶಗಳಿಂದ ೧೫ನೆ ಶತಮಾನದಲ್ಲಿ ಆ ಕಾಲದ ಸುಪ್ರಸಿದ್ಧ ಮುಸ್ಲಿಮ್ ಸಾಮ್ರಾಜ್ಯವಾಗಿದ್ದ ಒಟ್ಟೋಮನ್ ಸಾಮ್ರಾಜ್ಯದ ಇತರ ಭಾಗಗಳಿಗೂ ಹರಡಿತು. ಈ ಹೊಸ ಪೇಯವನ್ನು ಮಾರುವ ’ಕಾಫಿ ಮನೆ’ಗಳು ಕೈರೋ, ದಮಾ ಸ್ಕಸ್, ಇಸ್ತಾಂಬುಲ್ ಮತ್ತು ಬಗ್ದಾದ್‌ಗಳಂತಹ ಪ್ರಸಿದ್ಧ ನಗರಗಳಲ್ಲಿ ಹುಟ್ಟಿಕೊಂಡವು. ಅಲ್ಲಿಂದ ಕಾಫಿಯು ಸುಪ್ರಸಿದ್ಧ ವಾಣಿಜ್ಯ ಬಂದರು ನಗರಿ ವೆನಿಸ್ ಮೂಲಕವಾಗಿ ಯುರೋಪಿಗೆ ಪ್ರಯಾಣ ಬೆಳೆಸಿತು. ಮೊದಲಿಗೆ ಅದನ್ನು ’ಮುಸ್ಲಿಮ್ಪೇಯ’ಎಂದು ಕ್ರೈಸ್ತ ಅಧಿಕಾರಿಗಳು ತೆಗಳಿದರೂ, ಅದು ಕ್ರಮೇಣ ಐರೋಪ್ಯ ಸಂಸ್ಕೃತಿಯ ಭಾಗವೇ ಆಯಿತು. ೧,೬೦೦ರ ದಶಕದ ’ಕಾಫಿ ಮನೆ’ಗಳು- ಮಾನವನ ಹಕ್ಕು, ಸರಕಾರದ ಕರ್ತವ್ಯ, ಪ್ರಜಾಪ್ರಭುತ್ವ ಮುಂತಾದ ವಿಷಯಗಳ ಕುರಿತು ಯುರೋಪಿನ ಬುದ್ಧಿಜೀವಿಗಳ ಚರ್ಚೆಗಳಿಗೆ ತಾಣಗಳಾದವು. ಕಾಫಿ ಕುಡಿಯುತ್ತಲೇ ಉಂಟಾದ ’ಜ್ಞಾನೋದಯ’ವನ್ನು ಆಧುನಿಕ ಯುಗದ ಅತ್ಯಂತ ದೊಡ್ಡ ಬೌದ್ಧಿಕ ಚಳವಳಿ ಎನ್ನಬಹುದು.
ಯಮನ್/ಇಥಿಯೋಪಿಯಾದ ಪರ್ವತ ತಪ್ಪಲುಗಳಿಂದ ಯುರೋಪಿಗೆ ಯಾನ ಬೆಳೆಸಿ, ಅಲ್ಲಿ ಬೌದ್ಧಿಕ ಕ್ರಾಂತಿಗೆ ಕಾರಣವಾಗಿ, ಈಗ ಪ್ರತಿ ದಿನ ನೂರು ಕೋಟಿಗೂ ಹೆಚ್ಚು ಕಪ್‌ಗಳೊಳಗೆ ಸೇರುತ್ತಿರುವ ಕಾಫಿಯ ಸಂಶೋಧನೆಯು ಆಧುನಿಕ ಯುಗದ ಅತ್ಯಂತ ಮಹತ್ವದ ಸಂಶೋಧನೆಗಳಲ್ಲಿ ಒಂದು ಎನ್ನಬಹುದು.
ಬೀಜಗಣಿತ (ಅಲ್ಜಿಬ್ರ)
ಮಾಧ್ಯಮಿಕ ಶಾಲೆಗಳಲ್ಲಿ ಗಣಿತ ಕಲಿಯಲು ಒದ್ದಾಡುತ್ತಿರುವ ಹಲವಾರು ವಿದ್ಯಾರ್ಥಿಗಳು ಆಲ್ಜಿಬ್ರಾ ಅಥವಾ ಬೀಜಗಣಿತದ ಮಹತ್ವವನ್ನು ಅರ್ಥಮಾಡಿಕೊಳ್ಳಲಾರರು. ಆದರೆ, ಇದು ಆಧುನಿಕ ಪ್ರಪಂಚಕ್ಕೆ ಮುಸ್ಲಿಮ್ ಸುವರ್ಣ ಯುಗ ನೀಡಿದ ಮಹತ್ವದ ಕೊಡುಗೆಗಳಲ್ಲಿ ಒಂದು. ಇದನ್ನು ಅಭಿವೃದ್ಧಿಪಡಿಸಿದವರು ಕ್ರಿ.ಶ. ೭೮೦ರಿಂದ ೮೫೦ರ ತನಕ ಪರ್ಷಿಯಾ ಮತ್ತು ಇರಾಕ್‌ನಲ್ಲಿ ಬದುಕಿದ್ದ- ಮಹಾನ್ ವಿಜ್ಞಾನಿ ಮತ್ತು ಗಣಿತಶಾಸ್ತ್ರಜ್ಞರಲ್ಲಿ ಒಬ್ಬನಾದ ಮುಹಮ್ಮದ್ ಇಬ್ನ್ ಮೂಸಾ ಅಲ್ ಖವಾರಿಝಿಮಿ.
 ಅವರು ತನ್ನ ಬೃಹತ್ ಗ್ರಂಥವಾದ ಅಲ್-ಖಿತಾಬ್ ಅಲ್-ಮುಖ್ತ ಸರ್ ಫಿ ಹಿಸಾಬ್ ಅಲ್ ಜಿಬ್ರ್ ವಾ-ಐ-ಮುಖಾಬಲ (ಕಂಪೆಂಡಿಯಸ್ ಬುಕ್ ಆನ್ ಕ್ಯಾಲ್ಕುಲೇಷ ಬೈ ಕಂಪ್ಲೀಷನ್ ಆಂಡ್ ಬ್ಯಾಲೆನ್ಸಿಂಗ್. ಸರಳ ಅನುವಾದವಾಗಿ- ಪೂರ್ಣತೆ ಮತ್ತು ಸಮತೋಲನದ ಮೂಲಕ ಲೆಕ್ಕಾಚಾರ ಕುರಿತ ಸಂಹಿತೆ) ದಲ್ಲಿ ಅವರು ಬೀಜಗಣಿತದ ಸೂತ್ರಗಳ ಮೂಲತತ್ವಗಳನ್ನು ನಿರೂಪಿಸಿದ್ದಾರೆ. ಈ ಪುಸ್ತಕದ ಹೆಸರಿನಲ್ಲಿಯೇ ಅಲ್ ಜಬ್ರ ಅಂದರೆ, ಪೂರ್ಣಗೊಳಿಸುವಿಕೆ ಎಂಬ ಪದವಿದೆ. ಈ ಪದದಿಂದಲೇ ಲ್ಯಾಟಿನ್ ಭಾಷೆಯ ಪದ ಆಲ್ಜಿಬ್ರಾ ಬಂತು. ಈ ಪುಸ್ತಕದಲ್ಲಿ ಅಲ್ ಖವಾರಿಝಿಮಿಯು ಝಕಾತ್ ಲೆಕ್ಕಾಚಾರ, ಪಿತ್ರಾರ್ಜಿತ ಪಾಲುಪಟ್ಟಿ ಇತ್ಯಾದಿಗಳಲ್ಲಿ ಬರುವ ಸಮಸ್ಯೆ ಗಳನ್ನು- ಏರುಪೇರಾಗಬಹುದಾದ ಚರಾಂಶಗಳನ್ನು ಬೀಜಗಣಿತದ ಸೂತ್ರಗಳನ್ನು ಬಳಸಿಕೊಂಡು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದ್ದಾರೆ. ಕ್ಯಾಲ್ಕ್ಯುಲೇಟರ್ ಮತ್ತು ಕಂಪ್ಯೂಟರ್ಗಳಿಲ್ಲದ ಪ್ರಪಂಚದಲ್ಲಿ ಇಸ್ಲಾಮಿಕ್ ಕಾನೂನಿನಲ್ಲಿ ಕಡ್ಡಾಯಗೊಳಿಸಿದ ಲೆಕ್ಕಾಚಾರಗಳನ್ನು ಸುಲಭ ಗೊಳಿಸಬೇಕೆಂಬ ಬಯಕೆಯೇ ಅವರು ಬೀಜಗಣಿತವನ್ನು ಅಭಿವೃದ್ಧಿಪಡಿಸಲು ಮುಂದಾದುದಕ್ಕೆ ಕಾರಣವಾಯಿತು ಎಂಬುದು ವಿಶೇಷ.
ಕ್ರಿ.ಶ. ೧,೦೦೦ ಮತ್ತು ೧,೧೦೦ರ ಹೊತ್ತಿಗೆ ಯುರೋಪಿನಲ್ಲಿ ಅವರ ಪುಸ್ತಕ ಲ್ಯಾಟಿನ್ ಭಾಷೆಗೆ ಅನುವಾದವಾಗಿತ್ತು. ಅಲ್ಲಿ ಅಲ್ ಖವಾ ರಿಝಿಮಿಯು ಅವರ ಕೈಯಲ್ಲಿ ಅಲ್ ಗೋರಿತ್ಮಿ ಆಗಿದರ್ದು. (ಗಣಿ ತದ ಅಲ್ಗೋರಿಥಂ ಪದ್ಧತಿಗೆ ಅವರ ಹೆಸರು ಮತ್ತು ಕೃತಿಗಳೇ ಆಧಾರ). ಆಧುನಿಕ ಯುಗದಲ್ಲಿ ಇಂಜಿನಿಯರಿಂಗ್ ಮುಂತಾದವುಗಳಲ್ಲಿ ಗಣಿತದ ವಾಸ್ತವಿಕ ಬಳಕೆಯು ಬೀಜಗಣಿತವನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಕೊಡುಗೆಯಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. ಅವರ ಮರಣಾ ನಂತರದ ನೂರಾರು ವರ್ಷಗಳ ಕಾಲ ಆತನ ಕೃತಿಗಳು ಯುರೋಪಿನ ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯ ಪುಸ್ತಕಗಳಾಗಿ ಬಳಕೆಯಾಗುತ್ತಿದ್ದವು.
ವಿಶ್ವವಿದ್ಯಾನಿಲಯಗಳು
ವಿಶ್ವವಿದ್ಯಾನಿಲಯಗಳ ಬಗ್ಗೆ ಮಾತನಾಡುವುದಾದರೆ, ಅದು ಮುಸ್ಲಿಮ್ ಜಗತ್ತು ಕೊಡಮಾಡಿರುವ ಇನ್ನೊಂದು ಕೊಡುಗೆ. ಹಿಂದೆ ಮಸೀದಿಗಳೇ ಶಾಲೆಗಳಾಗಿ ಕೆಲಸ ಮಾಡುತ್ತಿದ್ದವು. ಅಲ್ಲಿ ಪ್ರಾರ್ಥನೆಯ ಮುಂದಾಳತ್ವ ವಹಿಸುತ್ತಿದ್ದವರೇ ಆಸಕ್ತರಿಗೆ ಇಸ್ಲಾಮಿಕ್ ವಿಜ್ಞಾನಗಳಾದ ಕುರ್‌ಆನ್, ಫಿಕ್ಹ್ (ಕರ್ಮಶಾಸ್ತ್ರ) ಮತ್ತು ಹದೀಸ್ ಇತ್ಯಾದಿಗಳನ್ನು ಕಲಿಸುತ್ತಿದ್ದರು. ಮುಂದೆ ಮುಸ್ಲಿಮ್ ಪ್ರಪಂಚ ಬೆಳೆದಂತೆ ಪ್ರತ್ಯೇಕವಾದ ಔಪಚಾರಿಕ ಶಾಲೆಗಳ ಅಗತ್ಯ ಕಂಡುಬಂತು. ಅವುಗಳೇ ವಿದ್ಯಾರ್ಥಿಗಳ ಶಿಕ್ಷಣಕ್ಕೆಂದೇ ಮೀಸಲಾದ ಮದರಸಗಳೆಂದು ಕರೆಯಲ್ಪಡುವ ಶಾಲೆಗಳು.
ಪ್ರಪಂಚದ ಮೊತ್ತಮೊದಲನೆಯ ಮದರಸವೆಂದರೆ ಅಲ್ಕರೌಯಿನ್. ಫಾತಿಮಾ ಅಲ್ ಫಿಹ್ರಿ ಎಂಬ ಮಹಿಳೆ ೮೫೯ನೆ ಇಸವಿಯಲ್ಲಿ ಮೊರೊಕ್ಕೊದ ಪೆಸ್‌ನಲ್ಲಿ ಇದನ್ನು ಸ್ಥಾಪಿಸಿದರು. ಈ ಮದರಸವು ಆ ಕಾಲದ ದೊಡ್ಡ ವಿದ್ವಾಂಸರು ಮತ್ತು ನಾಡಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿತು. ಅಲ್ಕರೌಯಿನ್‌ನಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳ ಕಾಲ ಲೌಕಿಕ ಮತ್ತು ಧಾರ್ಮಿಕ ವಿಜ್ಞಾನಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಕಲಿಸುತ್ತಿದ್ದರು. ಕಲಿಕೆಯ ಕೊನೆಗೆ ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ ಎಂದು ಶಿಕ್ಷಕರಿಗೆ ಅನಿಸಿದರೆ ಅವರು ಇರಝಾಜ ಎಂಬೊಂದು ಪ್ರಮಾಣಪತ್ರವನ್ನು ನೀಡುತ್ತಿದ್ದರು. ಇದು ಒಬ್ಬ ವಿದ್ಯಾರ್ಥಿ ತಾನು ಕಲಿತಿರುವ ವಿಷಯವನ್ನು ಅರ್ಥಮಾಡಿಕೊಂಡಿದ್ದು, ಬೇರೆಯವರಿಗೆ ಕಲಿಸಲು ಅರ್ಹತೆ ಹೊಂದಿರುವುದಾಗಿ ಮಾನ್ಯತೆ ನೀಡುತ್ತಿತ್ತು. ಈ ಮೊದಲ (ಪದವಿ ಪ್ರಧಾನ ಮಾಡುವ) ವಿದ್ಯಾಸಂಸ್ಥೆಗಳು ಇಡೀ ಮುಸ್ಲಿಮ್ ಪ್ರಪಂಚದಲ್ಲಿ ಹಬ್ಬಿದವು. ೯೭೦ರಲ್ಲಿ ಕೈರೋದಲ್ಲಿ ಅಲ್ ಅಝ್ಹರ್ ವಿಶ್ವವಿದ್ಯಾನಿಲಯ ಆರಂಭವಾಯಿತು. ೧೦೦೦ನೆ ಇಸವಿಯ ಬಳಿಕ ಪಶ್ಚಿಮ ಏಷ್ಯಾದ ಉದ್ದಗಲಕ್ಕೂ ಅನೇಕ ಮದರಸಗಳು ಹುಟ್ಟಿಕೊಂಡವು. ವಿದ್ಯಾಭ್ಯಾಸ ಪೂರ್ಣಗೊಂಡಿದೆ ಎಂದು ಪದವಿ ಪ್ರಮಾಣ ಪತ್ರವನ್ನು ನೀಡುವ ಪರಿಕಲ್ಪನೆಯು ನೂರಾರು ಐರೋಪ್ಯ ವಿದ್ಯಾರ್ಥಿಗಳು ಕಲಿಯಲು ಬರುತ್ತಿದ್ದ ಮುಸ್ಲಿಮ್ ಸ್ಪೇನ್‌ನ ಮೂಲಕ ಯುರೋಪ್‌ನ ಬೇರೆಬೇರೆ ಕಡೆ ಹರಡಿತು. ಅರ್ಹ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ, ಅವರು ನಿರ್ದಿಷ್ಟ ವಿಷಯದಲ್ಲಿ ಪರಿಣತಿ ಹೊಂದಿದ್ದಾರೆಂದು ದೃಢಪಡಿಸುವ ಮುಸ್ಲಿಮ್ ಸಂಪ್ರದಾಯವನ್ನು ಕ್ರಮವಾಗಿ ೧೧ ಮತ್ತು ೧೨ನೆ ಶತಮಾನದಲ್ಲಿ ಆರಂಭಗೊಂಡ ಇಟಲಿಯ ಬೊಲೊಗ್ನಾ ಮತ್ತು ಇಂಗ್ಲೆಂಡ್‌ನ ಆಕ್ಸ್ಪರ್ಡ್ ವಿಶ್ವವಿದ್ಯಾ ನಿಲಯಗಳು ಮುಂದುವರಿಸಿದವು.
ಸೇನಾ ಪಥಸಂಚಲನ ಬ್ಯಾಂಡ್
ಹೆಚ್ಚಿನ ಪಾಶ್ಚಾತ್ಯ ಶಾಲೆಗಳು ಮತ್ತು ನಮ್ಮಲ್ಲಿ ಕೂಡಾ ಮಾರ್ಚಿಂಗ್ ಬ್ಯಾಂಡ್‌ನ ಕುರಿತು ಎಲ್ಲರಿಗೂ ಗೊತ್ತಿದೆ. ಕ್ರೀಡಾ ಕೂಟಗಳ ಸಮಯದಲ್ಲಿ ಪ್ರೇಕ್ಷಕರನ್ನು ರಂಜಿಸಲು ಮತ್ತು ಕ್ರೀಡಾಳುಗಳನ್ನು ಪ್ರೋತ್ಸಾಹಿಸಲು ನೂರಾರು ಸಂಖ್ಯೆಯಲ್ಲಿ ಜನರು ಶಿಸ್ತಿನಿಂದ ಸಂಗೀತ ಸಾಧನಗಳನ್ನು ನುಡಿಸುತ್ತಾ ಪಥಸಂಚಲನ ಮಾಡುತ್ತಾರೆ. ಈ ಪಥಸಂಚಲನ ಬ್ಯಾಂಡನ್ನು ಯುರೋಪಿನ ಕೋವಿಮದ್ದಿನ ಯುಗ (ಗನ್ಪೌಡರ್ ಏಜ್)ದ ಪ್ರಭಾವದಿಂದ ಶಾಲೆಗಳಲ್ಲಿ ಅಳವಡಿಸಲಾಗಿದೆ. ಯುದ್ಧದ ವೇಳೆ ಸೈನಿಕರನ್ನು ಹುರಿದುಂಬಿಸಲು ಸೇನಾ ಬ್ಯಾಂಡನ್ನು ಬಳಸಲಾಗುತ್ತದೆ. ಯುರೋಪಿನ ಈ ಬ್ಯಾಂಡ್ ಸಂಪ್ರದಾಯಕ್ಕೆ ಮುಸ್ಲಿಮ್ ಮೂಲವಿದೆ. ಖ್ಯಾತ ಒಟ್ಟೋಮನ್ ಸಾಮ್ರಾಜ್ಯದಲ್ಲಿ ಈ ಮೆಹ್ತರ್ ಬ್ಯಾಂಡ್‌ಗಳು ೧೩೦೦ನೆ ಇಸವಿಯ ಹೊತ್ತಿಗೆ ಅಲ್ಲಿನ ಸೇನೆಯನ್ನು ಪ್ರಪಂಚದ ಅತ್ಯಂತ ಪ್ರಬಲ ಸೇನೆಗಳಲ್ಲಿ ಒಂದನ್ನಾಗಿ ಮಾಡಲು ನೆರವಾಗಿದ್ದವು.
ಒಟ್ಟೋಮನ್ ಸಾಮ್ರಾಜ್ಯದ ಜಾನ್ಸರಿ ತುಕಡಿಯ ಭಾಗವಾಗಿದ್ದ ಮೆಹ್ತರ್ ಬ್ಯಾಂಡ್‌ಗಳು ಭಾರೀ ಗಾತ್ರದ ಡೋಲು (ಡ್ರಮ್)ಗಳು ಮತ್ತು ತಾಳಗಳನ್ನು ಹೊಂದಿದ್ದು, ಅವು ಹೊರಡಿಸುತ್ತಿದ್ದ ಸದ್ದು ಮೈಲುಗಳ ವರೆಗೆ ಕೇಳುತ್ತಿತ್ತು. ಶತ್ರುಗಳಲ್ಲಿ ಭಯ ಹುಟ್ಟಿಸಲು ಮತ್ತು ಮಿತ್ರರನ್ನು ಹುರಿದುಂಬಿಸಲು ಅವುಗಳನ್ನು ಬಳಸಲಾಗುತ್ತಿತ್ತು. ೧೪ರಿಂದ ೧೬ನೇ ಶತಮಾನದ ಉದ್ದಕ್ಕೂ ಬಾಲ್ಕನ್ ಪ್ರದೇಶಗಳ ಮೇಲೆ ದಾಳಿಗಳು ನಡೆಯುತ್ತಿದ್ದಾಗ ಈ ಮೆಹ್ತರ್ ಬ್ಯಾಂಡ್‌ಗಳು ಯುರೋಪಿನ ಪ್ರಬಲ ಸೇನಾ ಒಕ್ಕೂಟಗಳ ಎದುರಲ್ಲಿ ಕೂಡಾ ಅಜೇಯವಾಗಿ ಕಾಣುತ್ತಿದ್ದ ಒಟ್ಟೋಮನ್ ಸೇನೆಯ ಜೊತೆಗಿರುತ್ತಿದ್ದವು. ಕಾಲಕ್ರಮೇಣ ಯುರೋಪಿಯನ್ನರು ಕೂಡಾ ಶತ್ರುಗಳನ್ನು ಬೆದರಿಸಲು ಸೇನಾ ಬ್ಯಾಂತಿಜಿಜಿgಳ ಬಳಕೆಯನ್ನು ಆರಂಭಿಸಿದರು. ಐತಿಹ್ಯಗಳ ಪ್ರಕಾರ ೧೬೮೩ರಲ್ಲಿ ಒಟ್ಟೋಮನ್ ಸೇನೆಯು ವಿಯೆನ್ನಾಕ್ಕೆ ಮುತ್ತಿಗೆ ಹಾಕಿದ ಬಳಿಕ ಮರಳಿ ಹೋಗುವಾಗ ತಮ್ಮ ಮೆಹ್ತರ್ ಬ್ಯಾಂಡಿನ ಕೆಲವು ಸಲಕರಣೆಗಳನ್ನು ಬಿಟ್ಟುಹೋಗಿತ್ತು. ಬಳಿಕ ಆಸ್ಟ್ರಿಯನ್ನರು ಅಮಗನ್ನು ಸಂಗ್ರಹಿಸಿ, ಅಧ್ಯಯನ ಮಾಡಿ ತಮ್ಮದೇ ಬ್ಯಾಂಡ್‌ಗಳನ್ನು ಆರಂಭಿಸಿದರು. ಯುರೋಪಿನ ಇತರ ಸೇನೆಗಳಲ್ಲೂ ಸೇನಾ ಬ್ಯಾಂಡ್‌ಗಳ ಬಳಕೆ ಆರಂಭವಾಗಿ ಶತಮಾನಗಳ ಕಾಲ ಯುರೋಪಿನಲ್ಲಿ ಯುದ್ಧ ಮಾಡುವ ವಿಧಾನದಲ್ಲಿಯೇ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿತು.
ಕ್ಯಾಮರಾಗಳು
ಇಂದು ಫೋಟೋಗ್ರಫಿ ಇಲ್ಲದಿರುವ ಪ್ರಪಂಚವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಬಿಲಿಯನ್ ಡಾಲರ್ ಕಂಪೆನಿಗಳಾದ ಇನ್ಸ್ಟಾಗ್ರಾಂ, ಕ್ಯಾನನ್ ಮುಂತಾದವುಗಳು ಒಂದು ದೃಶ್ಯದಿಂದ ಬೆಳಕನ್ನು ಹಿಡಿದು, ಆ ಬೆಳಕಿನಿಂದ ಚಿತ್ರವನ್ನು ರೂಪಿಸಿ, ಆ ಚಿತ್ರವನ್ನು ಮರುಸೃಷ್ಟಿ ಮಾಡುವ ತಂತ್ರದ ಮೇಲೆ ಆಧಾರಿತವಾಗಿವೆ. ಆದರೆ ಹಾಗೆ ಮಾಡುವುದು ೧೧ನೆ ಶತಮಾನದ ಅರಬ್ ವಿಜ್ಞಾನಿ ಇಬ್ನ್ ಅಲ್ ಹೈತಮ್‌ನ ಉಜ್ವಲವಾದ ಸಂಶೋಧನೆಯ ನೆರವಿಲ್ಲದೆ ಅಸಾಧ್ಯ. ಆತ ಮಸೂರಗಳ ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ, ಮುಂದಿನ ಕ್ಯಾಮರಾಗಳು ಹೇಗೆ ಕೆಲಸ ಮಾಡಲಿವೆ ಎಂಬುದನ್ನು ವಿವರಿಸಿದ್ದ.
೧೧ನೆ ಶತಮಾನದ ಆರಂಭಕಾಲದಲ್ಲಿ ರಾಜನಗರಿ ಈಜಿಪ್ಟ್ ನಲ್ಲಿ ವಾಸವಾಗಿದ್ದ ಇಬ್ನ್ ಅಲ್ ಹೇತಮ್, ಸಾರ್ವಕಾಲಿಕ ಶ್ರೇಷ್ಟ ವಿಜ್ಞಾನಿಗಳಲ್ಲಿ ಒಬ್ಬನಾಗಿದ್ದ. ವೈಜ್ಞಾನಿಕ ಪ್ರಗತಿಯನ್ನು ಕ್ರಮಬದ್ಧಗೊ ಳಿಸುವ ಸಲುವಾಗಿ, ಎಲ್ಲಾ ವೈಜ್ಞಾನಿಕ ಸಂಶೋಧನೆಗಳಿಗೆ ಆಧಾರವಾಗಿ ರುವಂತಹ ಮೂಲ ಪ್ರಕ್ರಿಯೆಯನ್ನು ಒಳಗೊಂಡ ವೈಜ್ಞಾನಿಕ ವಿಧಾನವನ್ನು ಆತ ಅಭಿವೃದ್ಧಿಗೊಳಿಸಿದ. ಫಾತಿಮಿದ್ ಅರಸ ಅಲ್-ಹಕೀಮ್ ಆತನನ್ನು ಗೃಹಬಂಧನದಲ್ಲಿರಿಸಿದ್ದಾಗ, ಬೆಳಕು ಹೇಗೆ ಕೆಲಸ ಮಾಡುತ್ತದೆ ಎಂದು ಕಂಡುಕೊಳ್ಳಲು ಅವನಿಗೆ ಸಮಯಾವಕಾಶ ಒದಗಿತು ಮತ್ತು ಅವನಿಗೆ ಆ ಸಾಮರ್ಥ್ಯವೂ ಇತ್ತು. ಬೆಳಕು ಹೋಗದಿರುವ ಒಂದು ಪೆಟ್ಟಿಗೆಯ ಒಂದು ಬದಿಯಲ್ಲಿ ಒಂದು ಚಿಕ್ಕ ರಂಧ್ರವನ್ನು ಮಾಡಿದರೆ, ಹೊರಗಿನ ಬೆಳಕಿನ ಕಿರಣಗಳು ಅದರ ಮೂಲಕ ಒಳಗೆ ಹೋಗಿ ಪೆಟ್ಟಿಗೆಯ ಹಿಂಬಾಗದ ಗೋಡೆಯಲ್ಲಿ ಪ್ರತಿಚಿತ್ರವನ್ನು ರಚಿಸು ತ್ತವೆ ಎಂಬುದನ್ನು ಗ್ರಹಿಸಿದ ಮೊದಲ ವಿಜ್ಞಾನಿ ಇಬ್ನ್ ಅಲ್ ಹೈತಮ್.
ಪಿನ್ಹೋಲ್ ಅಂದರೆ, ರಂಧ್ರ ಚಿಕ್ಕದಾಗಿದ್ದಷ್ಟು ಚಿತ್ರವು ಹೆಚ್ಚು ಸ್ಫುಟವಾಗಿರುತ್ತದೆ ಎಂಬುದು ಆತನಿಗೆ ಮನವರಿಕೆಯಾಯಿತು. ಇದರಿಂದಾಗಿ ಅವನಿಗೆ ನಂಬಲಾಗದಷ್ಟು ನಿಖರವಾಗಿ ಮತ್ತು ಸ್ಫುಟವಾಗಿ ಚಿತ್ರಗಳ ನ್ನು ಗ್ರಹಿಸುವ ಕ್ಯಾಮರಾಗಳನ್ನು ತಯಾರಿಸಲು ಸಾಧ್ಯವಾಯಿತು.
ಚಿತ್ರಗಳನ್ನು ಹೇಗೆ ಹೊರಹೊಮ್ಮಿಸಬಹುದು ಮತ್ತು ಗ್ರಹಿಸಬಹುದು ಅಥವಾ ಮೂಡಿಸಬಹುದು ಎಂಬ ಕುರಿತು ಇಬ್ನ್ ಅಲ್ ಹೈತಮ್ನ ಸಂಶೋಧನೆಗಳು ಮತ್ತು ಅದೇ ತತ್ವಗಳ ಮೇಲೆ ಆಧುನಿಕ ಕ್ಯಾಮರಾಗಳನ್ನು ತಯಾರಿಸಲು ಸಾಧ್ಯವಾಯಿತು. ಬೆಳಕು ಒಂದು ರಂಧ್ರದ ಮೂಲಕ ಹೇಗೆ ಚಲಿಸುತ್ತದೆ ಮತ್ತು ಹೇಗೆ ಹೊರಹೊಮ್ಮುತ್ತದೆ ಎಂಬ ಕುರಿತು ಆತನ ಸಂಶೋಧನೆಗಳಿಲ್ಲದಿದ್ದರೆ, ಎಲ್ಲರ ಕ್ಯಾಮರಾಗಳ ಒಳಗಿರುವ ಛಾಯಾಗ್ರಹಣ ವ್ಯವಸ್ಥೆಗಳು ಬಹುಶಃ ಇರುತ್ತಿರಲಿಲ್ಲ.

No comments:

Post a Comment